Friday, June 10, 2011

ಸಾವಿಗೆ ರಹದಾರಿ

             ಹಾಲು ಕುಡಿಯಬೇಕಾದ ಮಕ್ಕಳಿಗೆ ಟಾರ್, ಕಾರ್ಬನ್ ಮೊನೋಕ್ಸೈಡ್, ಅರ್ಸೆನಿಕ್, ಅಮೋನಿಯ, ಹೈಡ್ರೋಜೆನ್ ಸೈನೈಡ್, ಟೊಬ್ಯಾಕೋ ಗಳಂತಹ  ಹಾಲಾಹಲ. ಒಗಟಾಗಿ ಕಾಣುತ್ತಿದೆಯೇ? ಇಷ್ಟೊಂದು ವಿಷ ಪದಾರ್ಥಗಳ ಅಪೂರ್ವ ಮಿಳಿತವೇ ಸಿಗರೇಟ್. ದೊಡ್ಡವರ ಕೈಯಲ್ಲಿ ಸಿಗರೇಟ್ ಕಂಡದ್ದು ಹೊಸದೇನಲ್ಲ. ಆದರೆ ಈಗ ಚಿಕ್ಕ ಮಕ್ಕಳೂ ಅದರಿಂದ ಹೊರತಾಗಿಲ್ಲ ಎಂಬುದು ಕಟುಸತ್ಯ. ಬಾಲ್ಯದಿಂದಲೇ ಒತ್ತಡ ಹಾಗೂ ಸ್ಪರ್ಧಾತ್ಮಕ ಬದುಕು. ಇಂತಹ peer pressure ನಲ್ಲಿ ಪಾಲಕರ ಪಾತ್ರ ಅತಿ ಮಹತ್ವದ್ದಾಗಿರುತ್ತದೆ. ಆ ಮಕ್ಕಳಲ್ಲಿ ಆತ್ಮಾಭಿಮಾನ, ಆತ್ಮವಿಶ್ವಾಸ ಹೆಚ್ಚುವಂತೆ ನೋಡಿಕೊಂಡರೆ ಸಮಾಜ, ಸಹವಾಸ ದುಶ್ಚಟಗಳ ಆಮಿಶ ಒಡ್ಡಿದರೂ ಖಡಾಖಂಡಿತವಾಗಿ ’No’ ಎಂದು ಯಾವುದೇ ಭಯವಿಲ್ಲದೆ ಉತ್ತರಿಸುವ ಮನಸ್ಥಿತಿ ಅವರದ್ದಾಗಬಹುದು.

             ಹಾಂ, ಮೊದಲು ನೀ ಮಾಡು, ನಂತರ ಪಾಠ ಹೇಳು. ನೀವು ಸಿಗರೇಟಿನ ಗುಲಾಮರೆ? ಮೊದಲು ಅದನ್ನು ನಿಮ್ಮಿಂದ ದೂರಾಗಿಸಿ. ನಂತರ ಮಕ್ಕಳ ಮಾತು. ನೀವು ಹೇಳಬಹುದು, ದಿನಕ್ಕೆ 3-5 ಸಿಗರೇಟ್ ಮಾತ್ರ ಎಂದು, ದಿನಕ್ಕೆ 2-3 ಪ್ಯಾಕಿಗಿಂತ ಇದು ಲೇಸು ಎಂದು. ಹಾಗೆ ತಿಳಿದಿದ್ದಲ್ಲಿ ಅದು (dead wrong) ಖಂಡಿತಾ ತಪ್ಪು. ನೀವು ಸೇದುವ ಪ್ರತಿಯೊಂದು ಸಿಗರೇಟ್ ಕೂಡ ಸಾವನ್ನು ನಿಮ್ಮ ಹತ್ತಿರಕ್ಕೆ ಕರೆತಂದಂತೆ.
             ನೀವು ಸೇದುವುದನ್ನು ಕಂಡ ಮಕ್ಕಳು, ಹಾಂ, ಸೇದುವುದು ತಪ್ಪೇನಲ್ಲ ಎಂಬ ಭಾವನೆಗೆ ಸ್ಥಿರವಾಗುತ್ತಾರೆ. ಅಪ್ಪ ಸಿಗರೇಟ್ ಸೇದುತ್ತಾನೆ, ಅಪ್ಪ ಮಾಡುವಾಗ ನಾನ್ಯಾಕೆ ಮಾಡಬಾರದು? ಆಗ ಅಪ್ಪನಾದವನು ಮಗನಿಗೆ ಹೇಳುವ ಹಕ್ಕನ್ನು ಕಳೆದುಕೊಳ್ಳುತ್ತಾನೆ. ಅಪ್ಪಾ, ನೀನೆ ನಿನ್ನ ಮಗನಿಗೆ ರೋಲ್ ಮೋಡೆಲ್ ಆದೆ ಅಲ್ವಾ? ಶುರುವಿನಲ್ಲಿ ಮಕ್ಕಳು ದಿನಕ್ಕೆ 4 ಸಿಗರೇಟಿನಂತೆ ಸೇದಿ, ತದನಂತರವೂ ತಮ್ಮ ಆರೋಗ್ಯ ಹಾಳಾಗದ್ದನ್ನು ಗಮನಿಸಿ ಅದನ್ನು ಮುಂದುವರಿಸುವರು. ಮೊದಮೊದಲು 4, ಕೊನೆಕೊನೆಗೆ 40. scary!! Isn’t it? 
             ಸಿಗರೇಟನ್ನು ದೂರವಿರಿಸುವ ಅಥವ ಮೈಗೂಡಿಸಿಕೊಳ್ಳುವ ಬಗ್ಗೆ ನಿಮಗೆ ಯೋಚನೆಗಳಿದ್ದರೆ ಕೆಲವು ಮಾಹಿತಿ ಇಲ್ಲಿದೆ.
ನೀವು ಸೇದುವ ಪ್ರತಿಯೊಂದು ಸಿಗರೇಟ್ ಕೂಡ ನಿಮ್ಮ ಜೀವಿತಾವಧಿಯ 11 ನಿಮಿಷಗಳನ್ನು ಕಡಿಮೆಗೊಳಿಸುತ್ತದೆ! ಗಾಬರಿಯಾಯಿತೆ?
ಶ್ವಾಸಕೋಶಗಳ ಶ್ರಾದ್ಧಕ್ಕೆ ಮುನ್ನುಡಿ ಈ ಸಿಗರೇಟ್. ಒಟ್ಟು 4000 ರಾಸಾಯನಿಕಗಳು ಒಂದು ಸಿಗರೇಟಿನಲ್ಲಿರುತ್ತವೆ.
* ಉಳಿದ ರಾಸಾಯನಿಕ ವಿಷಗಳನ್ನು ನಮ್ಮ ರಕ್ತದಲ್ಲಿ ಸೇರುವಂತೆ ಮಾಡಿ, ಮುಖ್ಯವಾಗಿ ಕ್ಯಾನ್ಸರ್ ಗೆ ಕಾರಣವಾಗುವ Tar,
* ರಕ್ತದಲ್ಲಿನ ಆಮ್ಲಜನಕ (Oxygen)ದ ಪ್ರಮಾಣವನ್ನು ಕಡಿಮೆ ಮಾಡಿ, ಹ್ರದಯದ ಕಾರ್ಯಗಳಿಗೆ ತೊಂದರೆಯೊಡ್ಡುವ Carbon Monoxide,
* ಸತ್ತ ದೇಹಗಳನ್ನು ಸುಸ್ಥಿಥಿಯಲ್ಲಿಡಲು ಬಳಸುವ Formaldehyde,
* ಡೈ ಗಳಲ್ಲಿ ಬಳಸುವ Benzene,
* ಬ್ಯಾಟರಿಗಳನ್ನು ಮಾಡಲು ಬಳಸುವ Cadmium,
* ಸಿಗರೇಟಿನ ಅಭ್ಯಾಸಕ್ಕೆ ವಶವಾಗುವಂತೆ ಮಾಡುವ Nicotine,
* ನೇಲ್ ಪಾಲಿಶ್ ರಿಮೂವರ್ ಗಳಲ್ಲಿ ಬಳಸುವ Acetone,
* Arsenic, Ammonia, Lead, Mercury ಹಾಗೂ Hydrogen Cyanide ನಂತಹ ವಿಷ ಪದಾರ್ಥಗಳನ್ನೂ ಒಳಗೊಂಡಿರುತ್ತದೆ ee sigarette.
            ನಿಮ್ಮ ಸಿಗರೇಟ್ ಸೇದುವಿಕೆಯಿಂದ ನಿಮಗಷ್ಟೇ ಹಾನಿ ಎಂದು ತಿಳಿಯಬೇಡಿ. ಅದು ನಿಮ್ಮ ಸುತ್ತಮುತ್ತಲಿನವರನ್ನೂ ಹಾನಿಗೊಳಗಾಗಿಸಿರುತ್ತದೆ. ಅದು ನೀವು ಬಿಡುವ second hand smokeನಿಂದ, ಅದನ್ನು ಅವರು ಉಸಿರಾಡುವ ಕ್ರಿಯೆಯಿಂದ.
            ಹಾಂ, ಹಲವಾರು ವರ್ಷಗಳಿಂದ ನೀವು ಸಿಗರೇಟಿನ ಗುಲಾಮರಾಗಿದ್ದು, ಒಂದೇ ಸಲಕ್ಕೆ ಅದರಿಂದ ಹೊರಬಂದರೆ ನಿಮ್ಮ ಆರೋಗ್ಯ ಮತ್ತೆ ಮೊದಲಿನಂತೆ ಆಗುತ್ತದೆ ಎಂಬ ಭ್ರಮೆಯಲ್ಲಿರಬೇಡಿ. ಅದು ಆಗುವುದಿಲ್ಲ. ತಾನು ಮಾಡಬೇಕಾದ, ಮಾಡಬಹುದಾದ ಹಾನಿಯನ್ನು ಆ ಸಿಗರೇಟ್ ಮಾಡಿಯೇಬಿಟ್ಟಿರುತ್ತದೆ. ಅದೂ irriversible, ಮುಖ್ಯವಾಗಿ ನಿಮ್ಮ ಲಂಗ್ಸ್ ಗಳಿಗೆ. ಆದ್ದರಿಂದ ವಾಸ್ತವಕ್ಕಿಂತ ಹೆಚ್ಚಿನದ್ದನ್ನು ಅಪೇಕ್ಷಿಸಬೇಡಿ.

              ಹಾಗೆಂದು ಸಿಗರೇಟಿನಿಂದ ಹೊರಬಂದರೆ ಲಾಭವೇ ಇಲ್ಲ ಎಂದೇನಿಲ್ಲ. ಬಿಡಲು ಎಂದೂ ತಡವಲ್ಲ. ಅದನ್ನು ಯಾವಾಗ ತ್ಯಜಿಸಿದರೂ ಸರಿ, ನಿಮ್ಮ ದೇಹ ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳುತ್ತದೆ. ಅದನ್ನು ನೀವೇ ಗಮನಿಸಬಹುದು.
* ವಾಸನೆಯ ಗ್ರಹಿಕೆಯಲ್ಲಿ, ನಾಲಿಗೆ ರುಚಿಯ ಆಸ್ವಾದನೆಯಲ್ಲಿ ಸುಧಾರಣೆಯಾಗುತ್ತದೆ.
* ನಿಮ್ಮ ಉಸಿರಿಗೆ ಹೆಚ್ಚಿನ ಉತ್ಸಾಹ ಬಂದಿರುತ್ತದೆ.
* ರಕ್ತದ ಪರಿಚಲನೆ ಸುಧಾರಣೆಗೊಳ್ಳುತ್ತದೆ.
* ಆರ್ಟೆರೀಗಳ(arteries) ಮೇಲಿನ ಒತ್ತಡ ಕಡಿಮೆಯಾಗಿ ಹ್ರದಯದ ರೋಗಗಳೂ ಹಿಡಿತಕ್ಕೆ ಬರುತ್ತದೆ.
* ನಿಮ್ಮ ದೇಹ ಕ್ಯಾನ್ಸರ್ ಗಳನ್ನು ಕೋಂಟ್ರಾಕ್ಟಿಗೆ ತೆಗೆದುಕೊಳ್ಳುವ ಪ್ರಮಾಣವನ್ನೂ ಕಡಿಮೆಗೊಳ್ಳುತ್ತದೆ.
                 ಇಷ್ಟು ಸಾಕಲ್ಲವೇ ಸಿಗರೇಟನ್ನು ದೂರವಿಡಲು??


                                            - ಇಂಟರ್ ನೆಟ್ ನ ಸಹಕಾರದೊಂದಿಗೆ      
                                                             ಶ್ರುತಿ ಭಟ್.

..........................................


Give me some hope,
strengthen my trust on myself..
Give me the comfort,
console me for my fear about my future..
Give me the power,
to see the fruit at the end of my duties..

That will be the beginning of my happiness,
End of all the overheads,
uff.. finally a relief to me......

Wednesday, March 16, 2011

ಮರೆಯಾಗುತ್ತಿರುವ ನೆನಪಿನ ಒಂದು ಪುಟ..

ಎಲ್ಲರೂ ಪ್ರವಾಸ ಕಥನ ಬರೆಯುತ್ತಾರೆ. ನನಗೂ ಅನ್ನಿಸುತ್ತಿತ್ತು ನಾನೂ ಬರೆಯಬೇಕೆಂದು. ಆದರೆ ಎಲ್ಲಿಂದ ಬರೆಯಲಿ? ಯಾವ ಪ್ರವಾಸದ ಬಗ್ಗೆ ಬರೆಯಲಿ? ಮೊದಲು ನನ್ನ ಮನದ ಮೂಲೆಯಲ್ಲೆಲ್ಲೋ ಮರೆಯಾಗುತ್ತಿರುವ ನೆನಪಿನ ಒಂದು ಪುಟವನ್ನು ಈಚೆ ಎಳೆಯಲೇ??

ತುಂಬಾ ಹಿಂದೆ, ನಾನು ಶಾಲೆ ಸೇರಿದ ಶುರುವಿನಲ್ಲೆಲ್ಲೋ ಪ್ರವಾಸವೊಂದರ ಮುನ್ನುಡಿ ಬರೆದಿದ್ದೆ. ಅದು ನನ್ನ ಮನದ ಮೂಲೆಯಿಂದ ಮಸುಕಾಗುವ ಮೊದಲೇ ಅದನ್ನು ದಾಖಲಾಗಿಸಬೇಕೆನ್ನಿಸಿದೆ. ಅಮ್ಮನೂ ನನ್ನೀ ನೆನಪಿನ ಅರೆಬರೆ ಚಿತ್ತಾರಕ್ಕೆ ಜೀವ ತುಂಬುತ್ತಾಳೆ, ಬಣ್ಣವಾಗುತ್ತಾಳೆ, ಜೊತೆಯಲ್ಲಿ ಗೇಲಿ ಮಾಡಿ ನಗುತ್ತಾಳೆ ಕೂಡ..


ನಾನು ನನ್ನ ಮೊದಲ ಹೆಜ್ಜೆಯಿಟ್ಟ ಜಾಗ 'ಬಾದಾಮಿ'. ನನ್ನೊಳಗೇ ಜೀವಂತವಾಗಿ ಉಳಿದುಹೋದ ಆ ದಿನಗಳು.. ನಮ್ಮ ಸ್ವರ್ಗ ಅಲ್ಲಿಯೇ ಸೃಷ್ಟಿಯಾಗಿತ್ತು. ಕಾಲನಿಯಲ್ಲಿನ ಬದುಕು, ಕಣ್ಣಿಗೆ ನಿದ್ದೆ ಕಮರಿಕೊಳ್ಳುವವರೆಗೂ ಆಟದ ಓಟ. ಮನೆಯಿಂದ ಎಡವಿಬಿದ್ದರೆ ಶಾಲೆ. ವಾಣಿ, ವೀಣಾ, ವಿದ್ಯಾ, ಮುನ್ನಾ, ಶರತ್, ಅರವಿಂದ್ ನನ್ನೊಂದಿಗೇ ಶಾಲೆಗೇ ಹೋಗುವವರು. 


ಅದೊಂದು ದಿನ ನಮ್ಮ ಶಾಲೆಯಿಂದ ಪ್ರವಾಸವೆಂದು declare ಮಾಡಿದ್ದರು. ನಮಗೋ ಸಂಭ್ರಮ. ಕಾಲನಿಯಲ್ಲಿಯೇ ಇರುವ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ನಾಳಿನ ಪ್ರವಾಸದ ತಯಾರಿ ಮಾಡಿದ ನೆನಪು. ಚೀಟಿಯಲ್ಲಿ "ನಮ್ಮ ಪ್ರವಾಸಕ್ಕೆ ಜೈ" ಎಂದು ಗೀಚಿ ಮಡಚಿಟ್ಟುಕೊಂಡಿದ್ದು, ನಾಳೆ ಯಾವ ಅಂಗಿ ಹಾಕಿಕೊಳ್ಳುವುದು, ಯಾವ bag ತರುವುದು, ಡಬ್ಬಿಗೆ ಅಮ್ಮ ಏನೇನೆಲ್ಲ ತುಂಬುತ್ತಾಳೆ ಎಲ್ಲವೂ ಚರ್ಚೆಯ ವಿಷಯವಾಗಿತ್ತು. "ನಾವೆಲ್ರೂ ಒಟ್ಗೇ ಇರೋಣು, ಕೈ ತಪ್ಪಿಸ್ಕೊಂಡೀರ್ ಮತ್ತ...". ನಾವೆಲ್ಲೋ ದೂರ ಕಾಶಿ ಕೇದಾರದಂತಹ ಗೊತ್ತಿಲ್ಲದ ಸ್ಥಳಕ್ಕೆ ಹೋಗುತ್ತಿದ್ದೇವೇನೋ ಅನ್ನುವ ಹಾಗೆ ವಿದ್ಯಾಳ ಜವಾಬ್ದಾರಿಯುತ ಸಲಹೆ ಬೇರೆ. ಸೂರ್ಯ ಮುಳುಗಿ ಕತ್ತಲಾಗಿದ್ದರೂ ನಮ್ಮ ಉತ್ಸಾಹದ ಸೂರ್ಯ ಮುಳುಗಿರಲಿಲ್ಲ. ಎಲ್ಲ ಅಮ್ಮಂದಿರೂ ನಮ್ಮ ಜೋರು ತಯಾರಿಯನ್ನು ನೋಡಿ ಮುಸಿಮುಸಿ ನಗುತ್ತಿದ್ದರು.

ಬೆಳಗಾದರೆ ಪ್ರವಾಸ. ಆ ರೋಮಾಂಚನದಲ್ಲಿ ರಾತ್ರಿ ಮಲಗುವವರೆಗೂ ಅಮ್ಮನ ತಲೆ ತಿಂದಿದ್ದೆ. ಬೆಳಿಗ್ಗೆ ಕೆಂಪು-ಕಪ್ಪು ಬಣ್ಣದ frock ಸಿಕ್ಕಿಸಿಕೊಂಡು (ಹುಳು ತಿಂದ photo ಒಂದು ಸಾಕ್ಷಿಗಿದೆ) ಗುಂಡುಪೊಂಗಲ(ಪಡ್ಡು)-ಚಟ್ನಿಯ ಡಬ್ಬಿಯನ್ನು ಅಮ್ಮನ ಜಂಬದ ಚೀಲದಲ್ಲಿ ತುಂಬಿಕೊಂಡು, ಬನಶಂಕರಿ ಜಾತ್ರೆಯಲ್ಲಿ ಹಠ ಮಾಡಿ ಕೊಡಿಸಿಕೊಂಡಿದ್ದ ಬಣ್ಣದ  ಛತ್ರಿಯನ್ನೂ ಹಿಡಿದು ಚಿಲಿಪಿಲಿಗುಟ್ಟುವ ಮಕ್ಕಳ ಜೊತೆಗೆ ಶಾಲೆಗೆ ಹೊರಟಿದ್ದೆ. ಮತ್ತೊಂದು ತಾಸಿನಲ್ಲಿ ನಮ್ಮ ಮನೆಗಳ ಮುಂದೆಯೇ ನಮ್ಮ ಪ್ರವಾಸದ ಮೆರವಣಿಗೆ ಸಾಗಿತ್ತು !! 

ಆ ಪ್ರವಾಸದ ಚೆಂದ ನೋಡಲು ಮನೆಯ ಬಾಗಿಲ ಬಳಿ ನಿಂತಿದ್ದ ಅಮ್ಮನತ್ತ ಓಡಿ ಹೋಗಿ "ಅಮ್ಮಾ, ಪ್ರವಾಸ ಇಲ್ಲೇ ಹತ್ರನೆಯ, ನಂಗ್ ಈ ಛತ್ರಿ ಉಪ್ಯೋಗಿಲ್ಲೆ." ಎಂದು ಅದನ್ನು ಕೊಟ್ಟು ಮತ್ತೆ ಸಾಲನ್ನು ಸೇರಿದ್ದೆ. ಎಲ್ಲ teacher ಗಳಿಗೆ ಹಾಗೂ ಮಕ್ಕಳಿಗೆ ನಮ್ಮನೆ ಇದೇ ಎಂದು ತೋರಿಸುವ ಇರಾದೆಯೂ ನನ್ನದಾಗಿತ್ತೇನೋ. 

ನಮ್ಮ ಪ್ರವಾಸದ ಗಮ್ಯವಿದ್ದುದು ನಾವು ಹಿಂದಿನ ದಿನ ಪ್ರವಾಸಕ್ಕೆಂದು ತಯಾರಿ ನಡೆಸಿದ್ದ  ಅದೇ ಗಣಪತಿ ದೇವಸ್ಥಾನದಲ್ಲಿ !! ನಮ್ಮ ಮನೆಯಿಂದ ಕೂಗಳತೆಯ ದೂರ ಅದು. ಆವತ್ತು ನಮ್ಮ ದೇವರಿಗೆ ಅಲ್ಲಿ ವಿಶೇಷ ಪೂಜೆ, ತೀರ್ಥ-ಪ್ರಸಾದ ಹಂಚಿಕೆ.. ನಮಗೋ ಅಂದು ಎಲ್ಲಿಲ್ಲದ ಭಕ್ತಿ.. ದೇವಸ್ಥಾನದ ಪುಜಾರಿ ನಮ್ಮದೇ ನೆಂಟನೇನೋ ಎನ್ನುವ ಭಾವ. ಶಾಲೆಯ ಮಕ್ಕಳು ಹುಂಡಿಗೆ ಕಾಣಿಕೆ ಹಾಕುವುದನ್ನು ಕಂಡು ಕಾಲನಿಯ ಮಕ್ಕಳು ಕಂಗಾಲು! ನಿನ್ನೆಯ ಮೀಟಿಂಗಿನಲ್ಲಿ ಈ ವಿಷಯವೇ ಬಂದಿರಲಿಲ್ಲವಲ್ಲ! ದಿನವೂ ಕಾಣುವ ದೇವರಿಗೆ ನಾವೂ ಕಾಣಿಕೆ ಹಾಕಬೇಕೆಂದು ನಮಗ್ಯಾರಿಗೂ ಹೊಳೆದಿರಲೇ ಇಲ್ಲ. ಇದರಲ್ಲೂ ನಾವು ಕಡಿಮೆಯಿಲ್ಲವೆಂದು ತೋರಿಸಲು ಎಲ್ಲರೂ ಮನೆಗೆ ಓಡಿ ಕಾಣಿಕೆಯ ಜೊತೆಯಲ್ಲಿ ಪೂಜಾರಿಗೆ ದಕ್ಷಿಣೆಯನ್ನೂ ತಂದು ದೇವರಿಗೆ ಪ್ರದಕ್ಷಿಣೆ ಹಾಕಿದ್ದೆವು. 

ಅಲ್ಲಿಂದ ನಮ್ಮ ಪ್ರಯಾಣ ಸಾಗಿದ್ದುದು ನಾವು ದಿನವೂ ಆಡಿಕೊಂಡು ಬರುತ್ತಿದ್ದ ಐ.ಬಿ.ಗೆ.. ಅಲ್ಲಿಯೇ ಲಾನ್ ನಲ್ಲಿ ಕೆರೆ-ದಂಡೆ, ಕುಂಟೆ-ಬಿಲ್ಲೆ, ಅಂತಾಕ್ಷರಿಯ ಗೌಜು. ಸಮೀಪದ ಶರತ್ ಮನೆಯಿಂದಲೇ ದೊಡ್ಡದೊಂದು ball ತರಿಸಿ ಆಡಿಸಿದ್ದರು ಎಂದು ಅಮ್ಮಾ ತನ್ನ ನೆನಪಿನ ಡಬ್ಬಿಯ ಮುಚ್ಚಳ ತೆಗೆಯುತ್ತಾಳೆ. ನಂತರ ತಿಂಡಿ ತಿನ್ನುವ ವೈಭವ. ಪ್ರದರ್ಶನದ ಜೊತೆ exchange ಆಫರ್ ಗಳ ಭರಾಟೆ. ಮನೆಯಲ್ಲಿ ಬೆಳಗಿನ ತಿಂಡಿ ತಿನ್ನಲು ತಿಣುಕಾಡುವ ನಾನು (ಈಗಲೂ!) ಎಲ್ಲರೊಂದಿಗೆ ಡಬ್ಬಿ ಖಾಲಿ ಮಾಡಿದ್ದೆ! ಆಡಿದ್ದೂ ಆಯಿತು, ತಿಂದಿದ್ದೂ ಆಯಿತು. ಇಲ್ಲಿಗೆ ನಮ್ಮ ಪ್ರವಾಸದ ಕೊನೆಯ ಹಂತವೂ ಮುಗಿದಿತ್ತು. 

ಎಲ್ಲರೂ ಮತ್ತೆ ಸಾಲಿನಲ್ಲಿ ಮರಳಿ ಶಾಲೆಗೆ ಹೋಗುವಾಗ, ನಾವು ಮಾತ್ರ ಮಾರು ದೂರದಲ್ಲಿಯೇ ಸಿಕ್ಕ ನಮ್ಮ ನಮ್ಮ ಮನೆಗಳನ್ನು ಹೊಕ್ಕಿದ್ದೆವು. ಎಲ್ಲರಿಗೂ ನಮ್ಮ ಕಾಲನಿಯನ್ನು ಇಂಚಿಂಚೂ ಬಿಡದೆ ತೋರಿಸಿದ್ದೇ ನಮ್ಮ ಪ್ರವಾಸದ ಹೆಚ್ಚುಗಾರಿಕೆಯಾಗಿತ್ತು.  ಹೀಗೆ, ಎರಡು ದಿನಗಳಿಂದ ಬೀಗುತ್ತಿದ್ದ ನಮ್ಮ ಪ್ರವಾಸ ಪ್ರಯಾಸವಿಲ್ಲದೆ ನಮ್ಮ ಕಾಲನಿಯಲ್ಲಿಯೇ ಮುಗಿದುಹೋಗಿತ್ತು.. 


ನಮ್ಮ ಆಗಿನ ಆ ಪ್ರವಾಸ, ಅದರ ತಯಾರಿ ಇವೆಲ್ಲವನ್ನೂ ನೋಡಿ ಅಮ್ಮಂದಿರ ಮುಸಿಮುಸಿ ನಗು ಏಕಿತ್ತು ಎಂಬುದು ಈಗ ಅರ್ಥವಾಗುತ್ತಿದೆ.... ಆದರೆ... ಆಗ, ಆ ಉತ್ಸಾಹ, ಸುಖದ ಅನುಭೂತಿಗಳು ಅವನ್ನೆಲ್ಲಾ ಮೀರಿ ನಿಂತಿತ್ತು. ಹೀಗಾಗಿ ಪ್ರಯಾಸವಿಲ್ಲದೇ ಕಂಡ ಆಗಿನ ನನ್ನ ಆ ಪ್ರವಾಸವೇ ನನ್ನಲ್ಲಿ ಅಜರಾಮರ. ಈಗ ನನ್ನ ಮೊದಲ ಕಾಲೇಜಿನ ಕೊನೆಯ ಕಂತು.  ಅಲ್ಲಿಂದ ಇಷ್ಟು ದೀರ್ಘದ ಅವಧಿಯವರೆಗೂ ಮತ್ತೆ ನೆನಪಿನಲ್ಲುಳಿಯುವ ಮತ್ತೊಂದು ಪ್ರವಾಸದ ಮೆರವಣಿಗೆಯನ್ನು ನಾನು ಕಾಣಲೇ ಇಲ್ಲ. ಅಂತಹ ಅವಕಾಶವೇ ಸಿಕ್ಕಿರಲಿಲ್ಲ. 

ಅದಕ್ಕಾಗಿ ಮತ್ತೆ... ಈಗ, ಕಾಲೇಜಿನ ಕೊನೆಯ ದಿನಗಳಲ್ಲಿ ಮುಚ್ಚಿಕೊಳ್ಳುತ್ತಿರುವ ಎಲ್ಲ ಸಾಧ್ಯತೆಯನ್ನು ನಾವೇ ತೆರೆದುಕೊಂಡ ಪ್ರಯಾಣ.. ಯಾಣ, ಅಪ್ಸರಕೊಂಡ..

Monday, January 3, 2011

ಅಂತರಾಳ

ಜಾತಿ, ದೇವರು, ಧರ್ಮ
ಏನಿದರ ಮರ್ಮ?
ಹುಟ್ಟಿನಿಂದಲೇ ಹೊದ್ದ ಹೊದಿಕೆಯಿದು
ತೆಗೆಯಲಾಗದ ಹೇರಿಕೆಯಿದು
ಧರ್ಮಾಂಧತೆಯೆಂಬ ದಪ್ಪನೆಯ ಈ ಹೊದಿಕೆಯ 
ಹೊದೆಯಲೂ ಆಗದೆ ತೆಗೆಯಲೂ ಆಗದೆ
ಒದ್ದಾಡುತ್ತಿರುವ ಅಂತರಾಳವಿದು 
ಹುಲು ಮಾನವನ ಬದುಕಿದು 
ಮೇಲೆ ಆಡಿಸುವವನ ಆಟವಿದು..

Saturday, December 4, 2010

ತಲೆಹರಟೆ !!

                          ಇನ್ನೂ ಮುಗಿಯದ ಮಳೆಗಾಲದ ಮಧ್ಯದ ಮಳೆಯಿಲ್ಲದ ಒಂದು ಮುಸ್ಸಂಜೆ ಹೊತ್ತು. ಅಮ್ಮ ಕರಿದು ಕೊಟ್ಟ ಹಲಸಿನ ಹಪ್ಪಳದ ಜೊತೆ ಕಾಯಿಸುಳಿ, ಸಕ್ಕರೆ ಸೇರಿಸಿದ ತಟ್ಟೆಯನ್ನು ಜೊತೆಯಲ್ಲಿಟ್ಟುಕೊಂಡು terraceಗೆ ತಂದು ಅವನ್ನೆಲ್ಲಾ ಮುಂದಿಟ್ಟು ಕೂತೆ. ಮನೆಯಲ್ಲಿದ್ದವರೂ ಒಬ್ಬೊಬ್ಬರಾಗಿ ಬಂದು, ಸುತ್ತ ಕೂತು ತಟ್ಟೆಯಲ್ಲಿದ್ದುದನ್ನು ಖಾಲಿ ಮಾಡುವ ಕೆಲಸಕ್ಕೆ ಕೈ ಹಾಕಿದರು. ಮಬ್ಬುಗತ್ತಲೆಯಲ್ಲಿ ಮೆಲ್ಲನೆ ಬೀಸುವ ಗಾಳಿಯ ರಾಗಕ್ಕೆ ಹಪ್ಪಳ ಮುರಿಯುವ ಟಕ್ ಟಕ್ ಸದ್ದಿನೊಂದಿಗೆ ಕುರುಂ ಕುರುಂ ಎಂದು ಜಗಿಯುವ ಶಬ್ಧವೂ ಪೈಪೋಟಿಯಿಂದ ತಾಳ ಹಾಕಿ ಜುಗಲ್ಬಂಧಿ ನಡೆಸಿತ್ತು.                  
                     ಅಲ್ಲಿ ಹಪ್ಪಳ ತಿನ್ನುವ ಒಂದೇ ಕೆಲಸ ನಡೆದಿದ್ದರೆ ಈ ಲೇಖನವೇ ಹುಟ್ಟುತ್ತಿರಲಿಲ್ಲ. ಹಪ್ಪಳದ ಜೊತೆ ಅಲ್ಲಿ ನನ್ನ ತಂಗಿ ತಿಂದಿದ್ದು ನನ್ನ ತಲೆಯನ್ನೂ.... "ಅಕ್ಕಾ, ನೀ ಬರೆಯುವ ಕವನಗಳಿಗಿಂತಲೂ ನಿನ್ನ ಲೇಖನಗಳೇ ಚೆನ್ನಾಗಿರುತ್ತವೆ" ಎಂದು ಚರ್ಚೆಗೆ ಮುನ್ನುಡಿ ಇಟ್ಟಳು. "ಬರೆಯುವಲ್ಲಿ ಅವಳದಿನ್ನೂ ಪ್ರಾರಂಭ ಅಷ್ಟೆ, ಕೊನೆಯಲ್ಲ. ಕೊರತೆಗಳ ತುಂಬಿಕೊಳ್ಳಲು ಇನ್ನೂ ಕಾಲಾವಕಾಶವಿದೆ." ಎಂದು ಹೇಳುತ್ತಾ ಪಪ್ಪಾ ಕೈ ಕೊಡವಿಕೊಂಡು ಎದ್ದು ಹೋದರು. ಮತ್ತೆ ಅಲ್ಲಿ ಉಳಿದಿದ್ದು ಮೀಸೆ ಇಲ್ಲದವರ ಪರ-ವಿರೋಧ, ಅಭಿಪ್ರಾಯಗಳ ಮೀಮಾಂಸೆ. ವಿಷಯ ಇತ್ಯರ್ಥವಾಗಲಿಲ್ಲ. ಹಪ್ಪಳವೆಲ್ಲ ಮುಗಿದಮೇಲೆ ನನ್ನ ಬಳಿ ಉಳಿದದ್ದು ಖಾಲಿ ತಟ್ಟೆ ಮತ್ತು ಅವಳು ನನ್ನ ತಲೆಯಲ್ಲಿ ಬಿಟ್ಟ ಗುಂಗಿ ಹುಳು. ತಂಗಿ ಹೇಳಿದ್ದೂ ನಿಜ. ಆದರೆ ಇದಕ್ಕೆ ಕಾರಣ?.......
                     ಹಗಲುಗನಸುಗಳು ನನ್ನ ಹೆಗಲೇರಿ ಕುಳಿತುಕೊಳ್ಳುವಷ್ಟು ನಾನು ಭಾವ ಜೀವಿಯಲ್ಲ. ಮನದಲ್ಲೇಳುವ ಪ್ರತಿ ತರಂಗಗಳಿಗೂ ಮೂಲ ಹುಡುಕಲೂ ಹೋಗುವುದಿಲ್ಲ. ಅದಕ್ಕೇ ಇರಬೇಕು, ನನ್ನ ಪ್ರತಿ ಎದೆ ಬಡಿತದ ಕಾರಣಗಳನ್ನು ಶಬ್ದರೂಪದಲ್ಲಿ ತರುವಾಗ ನಾ ಗೆಲ್ಲುವುದಿಲ್ಲ. ಒಮ್ಮೊಮ್ಮೆ ಕಲ್ಪನೆಗಳೂ ನನಗೆ ಕೈ ಕೊಡುತ್ತವೆ. ಕಾವ್ಯಗಳನ್ನು ಓದುವ ಹವ್ಯಾಸ ಕಡಿಮೆ ಇರುವುದೂ ಇವಕ್ಕೆಲ್ಲಾ ಕಾರಣವೇನೋ ಎಂದು ನನ್ನನ್ನು ನಾನೇ ಸಮಾಧಾನಿಸಿಕೊಂಡೆ. 
                     ನಿಜ ಹೇಳಲೇ, ಕೆಲವು ಕವಿತೆಗಳ ಎಲ್ಲಾ ಮಗ್ಗಲುಗಳೂ ನನಗರ್ಥವಾಗುವುದಿಲ್ಲ. ಹಾಗೆಂದು ಅಂಥ ಕವಿತೆಗಳು ಮುಗ್ಗಲುಗಳು ಎಂದೇನೂ ನಾ ಅಂದುಕೊಳ್ಳುವುದಿಲ್ಲ. ಶಬ್ದಗಳನ್ನು ಅರ್ಥದ ಮೂಲಕ ಹೊಂದಿಸಲು ಅಸಮರ್ಥಳಾದಾಗ ಬರೆದವರ ಈ ಕವಿತೆ ಅತ್ಯಂತ ಮೇಲ್ಮಟ್ಟದ್ದಾಗಿದೆ, ಅದಕ್ಕೇ ನನಗರ್ಥವಾಗಲಿಲ್ಲ ಎಂಬ conclusionಗೆ ಬರುತ್ತೇನೆ. ನನಗದು ತಿಳಿಯಲಿಲ್ಲವೆಂದು ಬರೆದವರ ಬಳಿ ಹೇಳಿಕೊಳ್ಳಲೂ ಕಸಿವಿಸಿಯ ತೆರೆ ಬೇರೆ. ಬರೆದವರೋ ಜಾಣರು, ಕೇಳಿದ ಕೂಡಲೇ ಅವರ ಮನಸ್ಸಿನ ತಲ್ಲಣದ ಎಲ್ಲಾ ಪುಟಗಳನ್ನೂ ತೆರೆದು ತೋರುತ್ತಾರೆಯೇ? ಅದನ್ನು ಬಿಚ್ಚಿಟ್ಟ ಹಾಗೆ ಮಾಡಿ, ಮುಚ್ಚಿಟ್ಟು ಕಾಡುತ್ತಾರೆ! ಈ ಕಬ್ಬಿಣದ ಕಡಲೆಯಾಗುಳಿದ ಕವಿತೆಗಳನ್ನು ಕಂಡಾಗಲೆಲ್ಲಾ ಖ್ಯಾತ ಚಿತ್ರಕಾರರು ಅವರಿಚ್ಛೆಯಂತೆ ಗೆರೆ ಗೆರೆಗಳಿಂದ ಗೀಚಿ, new art ಎಂದು ನಾಮಕರಣ ಮಾಡಿದ, ಲಕ್ಷಾಂತರ ರೂಪಾಯಿ ಗಳಿಸುವ ಸಾಮರ್ಥ್ಯವಿರುವ, ನನಗರ್ಥವಾಗದ ಅವರ ಕಲ್ಪನೆಯ ಚಿತ್ರವೇ ನನ್ನ ಕಣ್ಮುಂದೆ ಕುಣಿಯುತ್ತದೆ.
                      ಎಲ್ಲಾ ಗೋಜಲು. ಸರಳ, ಸ್ಪಷ್ಟ, ಸುಂದರ, ಸಹ್ಯ ಕವನಗಳು ಮಾತ್ರ ಸಧ್ಯಕ್ಕೆ ನನ್ನನ್ನು ಆಪೋಶನ ತೆಗೆದುಕೊಳ್ಳುತ್ತಿವೆ. ಇನ್ನುಳಿದವೆಲ್ಲ ನನ್ನ ಪಾಲಿಗೆ ಬಿಡಿಸಲಾರದ ಗಂಟುಗಳು. ಅವರು ಬೀಜಗಣಿತ, ರೇಖಾಗಣಿತಗಳನ್ನೂ ಬಿಡದೇ ತಮ್ಮ ಕಲ್ಪನೆಯ ಕದ ತೆರೆದು ತೋರಿದ ಕವನಗಳು, ಅವುಗಳಿಗೆ ತತ್ವ ಶಾಸ್ತ್ರ, ನೀತಿ ಶಾಸ್ತ್ರ, ಮನಃ ಶಾಸ್ತ್ರಗಳನ್ನೂ ಮೀರಿದಂತೆ ಬರುವ ಅಸಾಧಾರಣ ಪ್ರತಿಕ್ರಿಯೆಗಳು.....! ಇವೆಲ್ಲವನ್ನೂ ಕಣ್ ಪಿಳುಕಿಸದೇ ನೋಡುತ್ತೇನೆ. 
                          ಒಟ್ಟಿನಲ್ಲಿ... ನಾನೀ ಬರೆಹ ಪ್ರಪಂಚಕ್ಕೆ ಈಗಷ್ಟೇ ಮೊಟ್ಟೆಯೊಡೆದು ಹೊರಬಂದ ಮರಿಯಂತಿದ್ದೇನೆ. ಆಚೀಚೆಯ blogಗಳಿಂದಲೂ ಗುಟುಕು ಸಿಗಬಹುದೇನೋ ಎಂದು ಕತ್ತು ಹೊರಳಿಸಿ ಕುತೂಹಲದಿಂದ   ಇಣುಕುತ್ತೇನೆ.  ಸಧ್ಯದ ಪರಿಸ್ಥಿತಿಯಲ್ಲಿ , ನನ್ನ commentಗಳೋ ಕವನ ಬರೆದವರೇ ಕಿತ್ತು ಬಿಸಾಡುವಷ್ಟು ಬಾಲಿಶ. ಶಿವ ಶಿವಾ...! ಏನೇ ಆದರೂ, ಮರಳಿ ಯತ್ನವ ಮಾಡು ಎನ್ನುವ ನಿರ್ಣಯದೊಂದಿಗೆ ಮತ್ತೆ ಅಖಾಡಕ್ಕಿಳಿಯುತ್ತೇನೆ. ಒಟ್ಟಾರೆಯಾಗಿ ಈ ಕೊರತೆಗಳನ್ನೆಲ್ಲ ತುಂಬಿಕೊಂಡು ನಾನೀ ಪ್ರಪಂಚಲ್ಲಿ ಬೆಳೆಯಬೇಕು, at-least ಹೃದ್ಯವಾಗಿ, ಪ್ರಬುದ್ಧವಾಗಿ ಪ್ರತಿಕ್ರಿಯೆ ನೀಡುವಷ್ಟಾದರೂ....
                      ಆ ದೂರದ ಬೆಟ್ಟವನ್ನು ಮುಟ್ಟಲು ಭಗೀರಥನಂತೆ ನನ್ನ ಪ್ರಯತ್ನ ನಡೆದೇ ಇರುತ್ತದೆ. 
                      ಯಶಸ್ವೀ ಭವ ಎನ್ನಿ ಮತ್ತೆ !! 






                     

Saturday, November 6, 2010

ನನ್ನಮ್ಮಾ............

ಈ ವಿರಾಟ್ ವಿಶ್ವವನ್ನೇ ಪರಿಚಯಿಸಿದ....  ಅಮ್ಮಾ.... ನಿನಗೆ ಕೃತಜ್ಞತೆಗಳು .
                 ಈ ವಿಶ್ವದ ಪರಿಭ್ರಮಣದೊ೦ದಿಗೇ ನಾನೂ ಪರಿಭ್ರಮಿಸುತ್ತಿದ್ದೇನೆ. ನನ್ನ ಸುತ್ತಲಿನ ಸು೦ದರ ಪ್ರಕೃತಿ, ಅದರ ವಿಕೋಪಗಳು, ಇಲ್ಲಿನ ಮಾನವ ನಿರ್ಮಿತ ಅದ್ಭುತಗಳು, ಶಬ್ದಕ್ಕೆ ನಿಲುಕದ ಅವನ ಬುದ್ಧಿ ಸಾಮರ್ಥ್ಯ, ಅವೆಲ್ಲವನ್ನೂ  ಮೀರಿ ನಿಲ್ಲುತ್ತಿರುವ ಇತ್ತೀಚೆಗಿನ ಅವನ ಮನೋದೌರ್ಬಲ್ಯ, ಈ ಸೃಷ್ಟಿಯ ವೈಚಿತ್ರ್ಯಗಳು, ಪ್ರಕೃತಿಯೊಂದಿಗೆ ಮಿಳಿತವಾಗಿರುವ ಈ ಜೀವ ಜಗತ್ತು, ಇವಕ್ಕೆಲ್ಲ ಕಾರಣೀಭೂತನಾದ ಆ ಸೂತ್ರಧಾರ ಯಾರೋ? ಆತ  ಎಲ್ಲಿದ್ದಾನೋ? ಹೇಗಿದ್ದಾನೋ? ಈ ಪೈಪೋಟಿಯ ಪ್ರಪಂಚದಲ್ಲಿ ನನ್ನ ಸ್ಥಾನ ಎಲ್ಲೋ? ಅರಿವಿಗೇ ಮೀರಿದ ನನ್ನೊಳಗಿನ ಪ್ರಶ್ನೆಗಳು.....         
                 
                ಈ ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿರುವ ನನಗೆ ಎಲ್ಲವೂ ಅಯೋಮಯ......         

                 ಕೊನೆಯಲ್ಲಿ ಅನ್ನಿಸುವುದೊಂದೇ ........
                 "ಕರುಣಾಳು ಬಾ ಬೆಳಕೆ                                                                     ಮುಸುಕಿದೀ ಮಬ್ಬಿನಲಿ                                                  
                   ಕೈ ಹಿಡಿದು ನಡೆಸೆನ್ನನು. "                                         

Friday, October 29, 2010

ಸಾಧನೆಯ ಹಾದಿಯಲ್ಲಿ.........


Study holidays ಅ೦ತ ಶುರುವಾಗಿಯೇ ಒ೦ದು ತಿ೦ಗಳಾಯಿತು. Sem practicle exams ಮುಗಿದು ಮೂರ್ ದಿನ ಆಯ್ತು. Theory exams ಮುಗಿಯೋಕೆ ಇನ್ನೂ ಒ೦ದು ತಿ೦ಗಳು ಬಾಕಿ ಇದೆ! ಇಲ್ಲಿ ನಾನು ಎಷ್ಟ್ ಓದ್ತಾ ಇದೀನಿ ಅನ್ನೋದು ಪ್ರಶ್ನೆ ಅಲ್ಲ. ನನ್ ಸಮಾಧಾನಕ್ಕಾಗಿಯಾದ್ರೂ ಎಚ್ಚರ ಇರೋವಷ್ಟ್ ಹೊತ್ತೂ ಕೈಲಿ ಪುಸ್ತಕ ಹಿಡ್ದಿದೀನಾ ಇಲ್ಲವಾ ಅನ್ನೋದು ಪ್ರಶ್ನೆ.

ವರ್ಷಕ್ 4 internals, 2 sem exams  ಅ೦ತಾ 6 ತಿ೦ಗಳು ಬರೀ ಪರೀಕ್ಷೆಗಳೇ. ಅದಕ್ಕೇ ಇರ್ಬೇಕು, degree ವಿದ್ಯಾರ್ಥಿಗಳೆಲ್ಲಾ ಈಗ exam ಅ೦ದ್ರೂ tension ಮಾಡ್ಕೊಳ್ಳೊಲ್ಲ(ಕೆಲ್ವರನ್ನ ಬಿಟ್ಟು). ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟ ಹಾಗೆ 3 idiots ಸಿನಿಮಾ ಪ್ರಭಾವ ಬೇರೆ. Examಗೆ 4 ದಿನ ಇರೋವಾಗ  syllabus ಹುಡ್ಕೋಕೆ, notes ಹೊ೦ದ್ಸೋಕೆ ಚುರುಕಾಗ್ತಾರೆ. ಅದನ್ನೇ ಹೆಮ್ಮೆಯಿ೦ದ ಹೇಳ್ಕೊಳ್ತಾರೆ ಕೂಡ.



"ಹೋಗೆ, ಅ೦ಗಡಿಯಿ೦ದ ಇಸ್ತ್ರಿ ಬಟ್ಟೆ ತೊಗೊ೦ಡುಬಾರೆ." "ನ೦ಗೆ ಓದ್ಕೋಬೇಕು ಅಮ್ಮಾ."  "phone bill ಕಟ್ಟಿ ಬಾರೆ." "ನ೦ಗೆ exam ದೇ.......,"   ಇಲ್ಲಿ ಕೆಲ್ಸದಿ೦ದ ಉಳುಚಿಕೊಳ್ಳೋಕೆ ಪರೀಕ್ಷೆಯದ್ದು ಮಹತ್ವದ ಪಾತ್ರ. ನ೦ಗೆ ಬೇಕಾದ ಸಿನಿಮಾ netನಲ್ಲಿ ನೋಡೋಕೆ, puzzle gamesಗೆ, tvಯಲ್ಲಿ ಬರೋ reality shows  ನೋಡೋಕೆಲ್ಲ ಇದು ಅನ್ವಯಿಸೋಲ್ಲ ಮತ್ತೆ.... ಹಾಗೇ ಪಪ್ಪ ಅಮ್ಮನೂ ಉಡುಪಿ, ಮ೦ಗಳೂರು, ಮೂಡುಬಿದ್ರೆಯ ಆಳ್ವಾಸ್ ನುಡಿಸಿರಿಗೆಲ್ಲಾ ನನ್ನನ್ನು ಬಿಟ್ಟು ಹೋಗೋವಾಗ ನನ್ನ exam ದೇ ಕಾರಣ ಕೊಡ್ತಾರೆ. ಅದು ಬೇಸರದ ವಿಷಯ. ಸಾಧನಾದಲ್ಲಿ ಜ್ಯೋತಿ ಪಟ್ಟಾಭಿರಾಮ್ ಅವರ ಭರತನಾಟ್ಯ ಇದೆ, ನೀನು ಬರಲ್ಲ ಅಲ್ವಾ? exam ಇದೆ. ಕಾರಣ ಹೇಳುವುದು ಅವರಿಗೂ ನಿರಾಳ. ಈ ಭಾಗ್ಯಕ್ಕೆ ಮನೆಲೇ ಇದ್ರೂ ತಲೆ free ಇರಲ್ಲ, ಹೊರಗಡೆ ಹೋದ್ರೂ ಮಜ ಬರಲ್ಲ.  ಮನೆಯಲ್ಲಿದ್ದು ಓದೋರ್ ಕಥೆ ಇದಾದ್ರೆ, hostel ನಲ್ಲಿದ್ದು ಓದ್ತಿರೋರ್ ವ್ಯಥೆ ಇನ್ ಹೇಗೋ....!

ಈ ಪರೀಕ್ಷೆಯ ನೆಪದಲ್ಲಿ ನಾನು ಪಡ್ಕೊ೦ಡಿದ್ದೆಷ್ಟು? ಕಳ್ಕೊ೦ಡಿರೋದೆಷ್ಟು? ಬಹುಶಃ ನಾನು ಕಳ್ಕೊ೦ಡಿರೋದೇ ಹೆಚ್ಚೇನೋ ಅನ್ಸೋಕ್ ಶುರುವಾಗಿದೆ. ಈ ಮಧ್ಯದಲ್ಲೇ  ಬ೦ದು ಹೋದ ಮದುವೆ(ಬೇರೆಯವರದ್ದು), ಹುಟ್ಟುಹಬ್ಬ, party, ಗಮ್ಮತ್ತು ಕಳ್ಕೊ೦ಡಿರೋದ್ರಲ್ಲೇ ಬ೦ತು. ಕೊನೆಯಲ್ಲಿ ಈ ಕಳ್ಕೊ೦ಡಿರೋ ಪಟ್ಟಿಯಲ್ಲಿ ನನ್ marks ಕೂಡ ಸೇರಿಕೊಳ್ದಿದ್ರೆ ಅಷ್ಟೇ ಸಾಕು. ಅದ್ಕೇ ನಾನ್ ಓದ್ಕೋಬೇಕು. ಈ social networks, blogs, updates, articles ಎಲ್ಲಾದಕ್ಕೂ bye bye, ಈ ಪರೀಕ್ಷೆಗಳೆಲ್ಲಾ ಮುಗಿಯೋವರೆಗೂ...  ಅಲ್ಲಲ್ಲಾ ನಾಳೆವರೆಗೂ....

ಇದು ನನ್ನೊಬ್ಬಳ ಅನುಭವ, ಅನಿಸಿಕೆಗಳು ಮಾತ್ರ ಅಲ್ಲ ಅ೦ದ್ಕೊ೦ಡಿದೀನಿ. ಇದ್ರಲ್ಲಿ ನ೦ಗೆ partners ಕೂಡ ತು೦ಬಾ ಇದ್ದಾರೆ (ಹಿ೦ದೆ ಇದ್ದವ್ರೂ, ಮು೦ದೆ ಬರುವವ್ರೂ) ಅನ್ನೋದೇ ನನಗೆ ಸ್ವಲ್ಪ ಸಮಾಧಾನ.

ಸಾಧನೆಯ ಹಾದಿಯಲ್ಲಿ ಎಷ್ಟೆಲ್ಲಾ..... ಕಲ್ಲು ಮುಳ್ಳು !!