Tuesday, June 8, 2010

ಈ ಭೇದ ಭಾವಗಳಿಗೆ ಕೊನೆಯೇ ಇಲ್ಲವೆ??

ರಾತ್ರಿ.... ಮಲಗಿದ್ದೆ.... ಮೊನ್ನೆ ನಡೆದ ಭೀಕರ ವಿಮಾನಾಪಘಾತದ ಗುಂಗಿನಲ್ಲಿ.... ಎಲ್ಲೋ ದೂರದಲ್ಲಿ ಯಾರು ಯಾರದ್ದೋ ಧ್ವನಿ ಕೇಳಿಬರುತ್ತಿತ್ತು. ಪ್ರೇತಾತ್ಮಗಳು! ಭಯವಾಯಿತು. ಎರಡು ಪ್ರೇತಗಳ ನಡುವೆ ಚರ್ಚೆ ನಡೆದಂತಿತ್ತು.


"ನೋಡ್, ಆಕಡಿಗ್ ಕುಂತಾರಲ್ಲ, ಅವ್ರೆಲ್ಲಾ ಮೊನ್ನಿ ಆದ ವಿಮಾನ್ ಅಪಘಾತ್ದಾಗ್ ಸತ್ತವ್ರು. ಅವ್ರಿಗ್ ನಮ್ ಹಾಂಗ ಬಿಟ್ ಬಂದ್ ಸಂಸಾರದ್ ಹೊಟ್ಟಿ ಚಿಂತಿ ಇಲ್ ಬಿಡ. ರಾಜ್ಯ ಸರ್ಕಾರಾ, ಕೇಂದ್ರ್ ಸರ್ಕಾರಾ ಯೆರ್ಡೆರ್ಡ ಲಕ್ಷಾ ಪರಿಹಾರ್ ಕೊಡ್ತದಂತ ಅವ್ರಿಗೆ. ವಿಮಾ ಸಂಸ್ಥಿ, ವಿಮಾನ ಸಂಸ್ಥಿ ಎಲ್ಲಾ ಸೇರಿ ಅಜಮಾಸ್ ಒಂದೊಂದ್ ಕೋಟಿನ ಅಕ್ಕೈತೇನ!"

"ಹಂಗಾರ್ ನಮ್ ಸಂಸಾರಕ್ಕೂ ಅಷ್ಟ ಪರಿಹಾರ್ ಸಿಗ್ತದೇನ?"

"ನಮ್ಮವ್ರಿಗೇನ ಸಿಗ್ತದ ಮಣ್ಣ! ನಾವೇನ್ ವಿಮಾನದಾಗ್ ಸತ್ತೀವೇನ? ರಾಜ್ ಮರ್ಯಾದಿ ಸಿಗಾಕ! ಚಿತ್ರದುರ್ಗದ್ ಚಳ್ಳಕೆರಿ ಸಮೀಪ್ ಸಾದಾ ಬಸ್ ಅಪಘಾತದಾಗ್ ಸುಟ್ಕೊಂಡ್ ಸತ್ ಮೂವತ್ ಮಂದಿ ನಾವ್. ಬಸ್ನಾಗಿದ್ ಬಾಕಿ ೨೪ ಮಂದಿ ಗತಿ ಅದೇನಾತ ಯೇನ."

"ನಾವ್ ಸತ್ತಾಗ ನಮ್ನ್ ನೋಡಾಕೂ ಮಂತ್ರಿಗ್ಳ ಯಾರಾರ ಬಂದಿದ್ರೇನ? ಅವ್ರ್ ಜೀವಕ್ಕಾರ ಚಿನ್ನದ್ ಬೆಲಿ, ನಮ್ ಹೆಣಕ್ ಕೌಡಿ ಕಿಮ್ಮತ್ತಿಲ್ಲಾ. ಬಡವ್ರಿಗೆ ಬದ್ಕಿದ್ದಾಗ... ಇಲ್ದಿದ್ ಬೆಲಿ ಸತ್ ಮ್ಯಾಗ್ ಎಲ್ಲಿಂದ್ ಬರ್ತೈತ್ ಬಿಡ. ಸತ್ತ ಜೀವಕ್ಕೂ ಯದಕ್ ಈ ಭೇದ ಭಾವ ಮಾಡ್ತಾರ ಅಂತೀನಿ? ನಾವೇನ್ ತಪ್ ಮಾಡೀವಿ?"

"ಖರೆ ಹೇಳ್ದಿ ನೀ. ಆದ್ರ ಅವ್ರಿಗ ಕೋಟಿಗಟ್ಲೆ ಕೊಡೋರು ವಿಮ ಸಂಸ್ಥಿಯವ್ರು. ನಮ್ ಬಸ್ಸಿಗ್ ಯೆಲ್ಲಿರ್ತೈತಿ ಅಷ್ಟ ವಿಮಾ? ಆಕಡಿಗ್ ಇನ್ನೊಂದ್ ಗುಂಪೈತ್ ನೋಡ್. ಮೇ ೧೫ಕ್ ಭೋಪಾಲ್ ಬಸ್ ಅಪಘಾತದಾಗ್ ಕರ್ರೆಂಟ್ ತಾಗಿ ಸತ್ರಲ್ಲಾ ೨೮ ಮಂದಿ, ಅವ್ರ ಅವ್ರು. ಅವ್ರೆಲ್ರೂ ಬುಡಕಟ್ ಜನಾಂಗ್ದವ್ರಂತ್."

"ಅವ್ರಿಗೂ ಪರಿಹಾರ್ ಸಿಗ್ತೈತೋ ಇಲ್ಲೋ, ನಮ್ ಹಾಂಗ... ಪಾಪ್ ನೋಡ್."

"ನಮ್ಮವ್ರಿಗ ಹತ್ತಿಪ್ಪತ್ ಸಾವ್ರಾ ಕೊಟ್ ಹಾಂಗ್ ಮಾಡಿ ಕೈ ತೊಳ್ಕೊಂಡ್ ಬಿಡ್ತದೋ ಏನ್ ಈ ಸರ್ಕಾರ. ರಾಜ್ಯ ಸರ್ಕಾರಾ, ನಾವ್ ಸತ್ತಿದ್ದಕ್ಕೂ
ಯೆರ್ಡೆರ್ಡ ಲಕ್ಷಾ ಪರಿಹಾರ್ ಕೊಟ್ಟಿದ್ರ ಮನಿಯವ್ರಿಗಾದ್ರೂ ಎರ್ಡ್ ಹೊತ್ತಿನ ಊಟ ಆಕ್ಕಿತ್ತ್ ಸಲ್ಪ್ ದಿನಾ. ಹೋಗ್ಲಿ ಅಂದ್ರ ಅವ್ರಿಗ್ ಕೊಟ್ ಹಾಂಗ ದೊಡ್ ಮನ್ಶಾರ್ ಯಾರಾರ ಒಬ್ರ್ ದೊಡ್ ಮನ್ಸ್ ಮಾಡಿ ನಮ್ ಸಂಸಾರಕ್ಕೂ ಒಂದೊಂದ್ ಕೆಲಸ ಕೊಡ್ಶಿದ್ರ ನಮ್ಮನಿಯಾಗ ಬದ್ಕಿದ್ದವ್ರಿಗ್ ವಂದ್ ದಾರಿ ಆರ ಆಕ್ಕಿತ್ತ್. ಏನಂತಿ?"


"ಹವ್ದ್ ಮತ್ತ! ಅಂದಂಗ, ಅವರ್ ಸುದ್ದಿ ತಿಂಗ್ಳಗಟ್ಲೆ ಪಪೆರ್ನಾಗ್ ಬರ್ತೈತಲ್ಲ, ಹಾಂಗ ನಮ್ ಸುದ್ದಿನೂ ನಾಕ ದಿನಾನಾರ ಬರ್ತೈತ್ ಹವ್ದಿಲ್ಲೋ?"


"ಅಜ್ಜಿಗ್ ಅರವಿ ಚಿಂತಿ ಅಂದ್ರ ಮೊಮ್ಮಗಂಗ್ ಕಜ್ಜಾಯದ್ ಚಿಂತಿ ಅಂದಂಗಾತು ನಿನ್ ಕತಿ! ನಾ ಮನಿ, ಮಕ್ಳ, ಸಂಸಾರ ಅಂತ ತೆಲಿ ಕೆಡ್ಸಕೊಂಡ್ ಕುಂತ್ರ ಇವಂಗ್ ಪಪೆರ್ನಾಗ್ ತನ್ ಹೆಸ್ರ್ ಬರ್ತೈತೋ ಇಲ್ಲೋ ಅನ್ನು ಚಿಂತಿ! ಹುಚ್ಚ್ ಖೋಡಿ ಅಡಿ ನೋಡ್ ನೀ."


"ಯೇ ನೋಡ್ಲಾ, ಮತ್ಯಾವನೋ ಬರಾಕತ್ತಾನ! ಇವಾ ಯಾವ್ ಅಪಘಾತದೊಳ್ಗ್ ಜೀವಾ ಕಳ್ಕೊಂಡಾನ ಯೇನ."


"ವಿಚಾರ್ಸೂಣ್ ತಡಿ... ಲೇ... ಇಲ್ ಬಾರಲೇ...!" ಎಂದು ಪ್ರೇತ ಕೂಗಿದಾಗ ನನಗೆ ಒಮ್ಮೆಲೇ ಎಚ್ಚರವಾಯಿತು (ನಿದ್ದೆಯಿಂದ)! ಕನಸುಗಳು ಕರಗಿದ್ದವು. ವಾಸ್ತವ ಕಣ್ಣ ಮುಂದಿತ್ತು. ಪ್ರೇತಗಳ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ನಿಜ. ದಿನನಿತ್ಯ ಅಪಘಾತಕ್ಕೆ ಸಿಲುಕುವ ಬಡಪಾಯಿಗಳ ಜೀವಕ್ಕೆ ಬೆಲೆ ಇಲ್ಲ ಇಲ್ಲಿ. ಇವರ ಕುಟುಂಬದವರು ಅಪಘಾತದ ಪರಿಹಾರಕ್ಕಾಗಿ ಕಾನೂನಿನ ಮೊರೆ ಹೊಕ್ಕು ಹೋರಡುವಷ್ಟು ಶಕ್ತರೂ ಅಲ್ಲ.


ಅಪಘಾತ ವಲಯ ಎಂದೇ ಹೆಸರಾಗಿರುವ ಆನೆಗುಂಡಿ, ಬೈಂದೂರ, ಚಾರ್ಮುಡಿ ಘಾಟಿನಂತ ಪ್ರದೇಶಗಳು 'ಮರಣ ಮೃದಂಗ' ಬಾರಿಸುತ್ತಲೇ ಇವೆ. ಇಲ್ಲಿನ ಇಳಿಜಾರಿನ ರಸ್ತೆಯ ತಿರುವುಗಳು ಬಹಳ ಅಪಾಯಕಾರಿಯಾಗಿವೆ. ರಸ್ತೆಯ ಸೂಚನಾ ಫಲಕಗಳೂ ತುಂಬಾ ಕಿರಿದು. ಇಂಥಲ್ಲಿ ಗುಡ್ಡವನ್ನು ಇನ್ನಷ್ಟು ಕಡಿದು ರಸ್ತೆ ಅಗಲಗೊಲಿಸಿಯೋ ಅಥವಾ ರಸ್ತೆಯನ್ನು ಸ್ವಲ್ಪವಾದರೂ ನೇರಗೊಳಿಸಿದ್ದಲ್ಲಿ, ಅಲ್ಲಿನ ಅಪಘಾತಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ತಪ್ಪಿಸಬಹುದಿತ್ತೇನೋ.


ವಿಮಾನಾಪಘಾತಗಳನ್ನು ಕಡಿಮೆಗೊಳಿಸಲು ಹೇಗೆ ಪ್ರಯತ್ನ ನಡೆಯುತ್ತಿದೆಯೋ, ಹಾಗೆಯೇ ಇಲ್ಲಿಯೂ ಪ್ರಯತ್ನ ನಡೆಯುತ್ತಲೇ ಇದ್ದರೂ ಫಲದಾಯಕವಾಗುತ್ತಿಲ್ಲ. ಕಾರಣ ಅತಿವೇಗದ, ಅಜಾಗರೂಕತೆಯ ಚಾಲನೆ, ಬೆಳಗಿನ ಜಾವದಲ್ಲಿನ ವಾಹನ ಚಾಲನೆಯ ಜೊತೆಗೆ ಕುಡಿದು ವಾಹನ ಚಲಾಯಿಸುವುದೂ ಅಪಘಾತಗಳಿಗೆ ಪ್ರೇರಣೆಯಾಗಿವೆ. ಅಂದಲ್ಲಿ, ಅಪಘಾತಗಳನ್ನು ತಪ್ಪಿಸುವಲ್ಲಿ ಕೇವಲ ಸರ್ಕಾರ ಒಳ್ಳೆಯ ರಸ್ತೆ, ಬೇಕಾದ ಅನುಕೂಲತೆಗನ್ನು ಒದಗಿಸಿದರೆ ಸಾಲದು, ನಮ್ಮ ಹೊಣೆಯೂ ಇದರಲ್ಲಿ ಮಹತ್ವದ್ದಾಗಿದೆ. ಅಂತೆಯೇ ತಮ್ಮ ತಪ್ಪಿಲ್ಲದೆಯೂ ಇಂತಹ ದುರಂತಗಳಿಗೆ ಸಿಲುಕುವ ಪ್ರಯಾಣಿಕರಿಗೆ ಸಮಾನವಾದ ಪರಿಹಾರ ನೀಡುವುದೂ ಸರ್ಕಾರದ ಕರ್ತವ್ಯವಾಗಿದೆ. ಇಂತಹ ದುರಂತಗಳಿಗೆ ಬಲಿಯಾದ ಬಡವರಿಗೆ ನ್ಯಾಯ ಒದಗಿಸುವಲ್ಲಿ ನಾವೂ ಕೂಡ ಧ್ವನಿಯಾಗೋಣ.
________________________________________________________
       was published in udayavani on 13/06/2010



7 comments:

  1. pakka dharwadad hudgi antha prove maadbutyale!!! nice work:-)

    ReplyDelete
  2. hey its really good re........... i liked it...Its really worth reading it..... i think atleast by reading this they change themselves by doing partiality.........!!!!

    ReplyDelete
  3. cholo bareje shruti.. :) Nice, use of "Dharwad Bhashe".. I loved it.. :)

    ReplyDelete
  4. good article... u've chosen a complex topic and presentation is good..:)

    ReplyDelete
  5. " awesome dear..keep it up.. All the best"

    ReplyDelete