Saturday, December 4, 2010

ತಲೆಹರಟೆ !!

                          ಇನ್ನೂ ಮುಗಿಯದ ಮಳೆಗಾಲದ ಮಧ್ಯದ ಮಳೆಯಿಲ್ಲದ ಒಂದು ಮುಸ್ಸಂಜೆ ಹೊತ್ತು. ಅಮ್ಮ ಕರಿದು ಕೊಟ್ಟ ಹಲಸಿನ ಹಪ್ಪಳದ ಜೊತೆ ಕಾಯಿಸುಳಿ, ಸಕ್ಕರೆ ಸೇರಿಸಿದ ತಟ್ಟೆಯನ್ನು ಜೊತೆಯಲ್ಲಿಟ್ಟುಕೊಂಡು terraceಗೆ ತಂದು ಅವನ್ನೆಲ್ಲಾ ಮುಂದಿಟ್ಟು ಕೂತೆ. ಮನೆಯಲ್ಲಿದ್ದವರೂ ಒಬ್ಬೊಬ್ಬರಾಗಿ ಬಂದು, ಸುತ್ತ ಕೂತು ತಟ್ಟೆಯಲ್ಲಿದ್ದುದನ್ನು ಖಾಲಿ ಮಾಡುವ ಕೆಲಸಕ್ಕೆ ಕೈ ಹಾಕಿದರು. ಮಬ್ಬುಗತ್ತಲೆಯಲ್ಲಿ ಮೆಲ್ಲನೆ ಬೀಸುವ ಗಾಳಿಯ ರಾಗಕ್ಕೆ ಹಪ್ಪಳ ಮುರಿಯುವ ಟಕ್ ಟಕ್ ಸದ್ದಿನೊಂದಿಗೆ ಕುರುಂ ಕುರುಂ ಎಂದು ಜಗಿಯುವ ಶಬ್ಧವೂ ಪೈಪೋಟಿಯಿಂದ ತಾಳ ಹಾಕಿ ಜುಗಲ್ಬಂಧಿ ನಡೆಸಿತ್ತು.                  
                     ಅಲ್ಲಿ ಹಪ್ಪಳ ತಿನ್ನುವ ಒಂದೇ ಕೆಲಸ ನಡೆದಿದ್ದರೆ ಈ ಲೇಖನವೇ ಹುಟ್ಟುತ್ತಿರಲಿಲ್ಲ. ಹಪ್ಪಳದ ಜೊತೆ ಅಲ್ಲಿ ನನ್ನ ತಂಗಿ ತಿಂದಿದ್ದು ನನ್ನ ತಲೆಯನ್ನೂ.... "ಅಕ್ಕಾ, ನೀ ಬರೆಯುವ ಕವನಗಳಿಗಿಂತಲೂ ನಿನ್ನ ಲೇಖನಗಳೇ ಚೆನ್ನಾಗಿರುತ್ತವೆ" ಎಂದು ಚರ್ಚೆಗೆ ಮುನ್ನುಡಿ ಇಟ್ಟಳು. "ಬರೆಯುವಲ್ಲಿ ಅವಳದಿನ್ನೂ ಪ್ರಾರಂಭ ಅಷ್ಟೆ, ಕೊನೆಯಲ್ಲ. ಕೊರತೆಗಳ ತುಂಬಿಕೊಳ್ಳಲು ಇನ್ನೂ ಕಾಲಾವಕಾಶವಿದೆ." ಎಂದು ಹೇಳುತ್ತಾ ಪಪ್ಪಾ ಕೈ ಕೊಡವಿಕೊಂಡು ಎದ್ದು ಹೋದರು. ಮತ್ತೆ ಅಲ್ಲಿ ಉಳಿದಿದ್ದು ಮೀಸೆ ಇಲ್ಲದವರ ಪರ-ವಿರೋಧ, ಅಭಿಪ್ರಾಯಗಳ ಮೀಮಾಂಸೆ. ವಿಷಯ ಇತ್ಯರ್ಥವಾಗಲಿಲ್ಲ. ಹಪ್ಪಳವೆಲ್ಲ ಮುಗಿದಮೇಲೆ ನನ್ನ ಬಳಿ ಉಳಿದದ್ದು ಖಾಲಿ ತಟ್ಟೆ ಮತ್ತು ಅವಳು ನನ್ನ ತಲೆಯಲ್ಲಿ ಬಿಟ್ಟ ಗುಂಗಿ ಹುಳು. ತಂಗಿ ಹೇಳಿದ್ದೂ ನಿಜ. ಆದರೆ ಇದಕ್ಕೆ ಕಾರಣ?.......
                     ಹಗಲುಗನಸುಗಳು ನನ್ನ ಹೆಗಲೇರಿ ಕುಳಿತುಕೊಳ್ಳುವಷ್ಟು ನಾನು ಭಾವ ಜೀವಿಯಲ್ಲ. ಮನದಲ್ಲೇಳುವ ಪ್ರತಿ ತರಂಗಗಳಿಗೂ ಮೂಲ ಹುಡುಕಲೂ ಹೋಗುವುದಿಲ್ಲ. ಅದಕ್ಕೇ ಇರಬೇಕು, ನನ್ನ ಪ್ರತಿ ಎದೆ ಬಡಿತದ ಕಾರಣಗಳನ್ನು ಶಬ್ದರೂಪದಲ್ಲಿ ತರುವಾಗ ನಾ ಗೆಲ್ಲುವುದಿಲ್ಲ. ಒಮ್ಮೊಮ್ಮೆ ಕಲ್ಪನೆಗಳೂ ನನಗೆ ಕೈ ಕೊಡುತ್ತವೆ. ಕಾವ್ಯಗಳನ್ನು ಓದುವ ಹವ್ಯಾಸ ಕಡಿಮೆ ಇರುವುದೂ ಇವಕ್ಕೆಲ್ಲಾ ಕಾರಣವೇನೋ ಎಂದು ನನ್ನನ್ನು ನಾನೇ ಸಮಾಧಾನಿಸಿಕೊಂಡೆ. 
                     ನಿಜ ಹೇಳಲೇ, ಕೆಲವು ಕವಿತೆಗಳ ಎಲ್ಲಾ ಮಗ್ಗಲುಗಳೂ ನನಗರ್ಥವಾಗುವುದಿಲ್ಲ. ಹಾಗೆಂದು ಅಂಥ ಕವಿತೆಗಳು ಮುಗ್ಗಲುಗಳು ಎಂದೇನೂ ನಾ ಅಂದುಕೊಳ್ಳುವುದಿಲ್ಲ. ಶಬ್ದಗಳನ್ನು ಅರ್ಥದ ಮೂಲಕ ಹೊಂದಿಸಲು ಅಸಮರ್ಥಳಾದಾಗ ಬರೆದವರ ಈ ಕವಿತೆ ಅತ್ಯಂತ ಮೇಲ್ಮಟ್ಟದ್ದಾಗಿದೆ, ಅದಕ್ಕೇ ನನಗರ್ಥವಾಗಲಿಲ್ಲ ಎಂಬ conclusionಗೆ ಬರುತ್ತೇನೆ. ನನಗದು ತಿಳಿಯಲಿಲ್ಲವೆಂದು ಬರೆದವರ ಬಳಿ ಹೇಳಿಕೊಳ್ಳಲೂ ಕಸಿವಿಸಿಯ ತೆರೆ ಬೇರೆ. ಬರೆದವರೋ ಜಾಣರು, ಕೇಳಿದ ಕೂಡಲೇ ಅವರ ಮನಸ್ಸಿನ ತಲ್ಲಣದ ಎಲ್ಲಾ ಪುಟಗಳನ್ನೂ ತೆರೆದು ತೋರುತ್ತಾರೆಯೇ? ಅದನ್ನು ಬಿಚ್ಚಿಟ್ಟ ಹಾಗೆ ಮಾಡಿ, ಮುಚ್ಚಿಟ್ಟು ಕಾಡುತ್ತಾರೆ! ಈ ಕಬ್ಬಿಣದ ಕಡಲೆಯಾಗುಳಿದ ಕವಿತೆಗಳನ್ನು ಕಂಡಾಗಲೆಲ್ಲಾ ಖ್ಯಾತ ಚಿತ್ರಕಾರರು ಅವರಿಚ್ಛೆಯಂತೆ ಗೆರೆ ಗೆರೆಗಳಿಂದ ಗೀಚಿ, new art ಎಂದು ನಾಮಕರಣ ಮಾಡಿದ, ಲಕ್ಷಾಂತರ ರೂಪಾಯಿ ಗಳಿಸುವ ಸಾಮರ್ಥ್ಯವಿರುವ, ನನಗರ್ಥವಾಗದ ಅವರ ಕಲ್ಪನೆಯ ಚಿತ್ರವೇ ನನ್ನ ಕಣ್ಮುಂದೆ ಕುಣಿಯುತ್ತದೆ.
                      ಎಲ್ಲಾ ಗೋಜಲು. ಸರಳ, ಸ್ಪಷ್ಟ, ಸುಂದರ, ಸಹ್ಯ ಕವನಗಳು ಮಾತ್ರ ಸಧ್ಯಕ್ಕೆ ನನ್ನನ್ನು ಆಪೋಶನ ತೆಗೆದುಕೊಳ್ಳುತ್ತಿವೆ. ಇನ್ನುಳಿದವೆಲ್ಲ ನನ್ನ ಪಾಲಿಗೆ ಬಿಡಿಸಲಾರದ ಗಂಟುಗಳು. ಅವರು ಬೀಜಗಣಿತ, ರೇಖಾಗಣಿತಗಳನ್ನೂ ಬಿಡದೇ ತಮ್ಮ ಕಲ್ಪನೆಯ ಕದ ತೆರೆದು ತೋರಿದ ಕವನಗಳು, ಅವುಗಳಿಗೆ ತತ್ವ ಶಾಸ್ತ್ರ, ನೀತಿ ಶಾಸ್ತ್ರ, ಮನಃ ಶಾಸ್ತ್ರಗಳನ್ನೂ ಮೀರಿದಂತೆ ಬರುವ ಅಸಾಧಾರಣ ಪ್ರತಿಕ್ರಿಯೆಗಳು.....! ಇವೆಲ್ಲವನ್ನೂ ಕಣ್ ಪಿಳುಕಿಸದೇ ನೋಡುತ್ತೇನೆ. 
                          ಒಟ್ಟಿನಲ್ಲಿ... ನಾನೀ ಬರೆಹ ಪ್ರಪಂಚಕ್ಕೆ ಈಗಷ್ಟೇ ಮೊಟ್ಟೆಯೊಡೆದು ಹೊರಬಂದ ಮರಿಯಂತಿದ್ದೇನೆ. ಆಚೀಚೆಯ blogಗಳಿಂದಲೂ ಗುಟುಕು ಸಿಗಬಹುದೇನೋ ಎಂದು ಕತ್ತು ಹೊರಳಿಸಿ ಕುತೂಹಲದಿಂದ   ಇಣುಕುತ್ತೇನೆ.  ಸಧ್ಯದ ಪರಿಸ್ಥಿತಿಯಲ್ಲಿ , ನನ್ನ commentಗಳೋ ಕವನ ಬರೆದವರೇ ಕಿತ್ತು ಬಿಸಾಡುವಷ್ಟು ಬಾಲಿಶ. ಶಿವ ಶಿವಾ...! ಏನೇ ಆದರೂ, ಮರಳಿ ಯತ್ನವ ಮಾಡು ಎನ್ನುವ ನಿರ್ಣಯದೊಂದಿಗೆ ಮತ್ತೆ ಅಖಾಡಕ್ಕಿಳಿಯುತ್ತೇನೆ. ಒಟ್ಟಾರೆಯಾಗಿ ಈ ಕೊರತೆಗಳನ್ನೆಲ್ಲ ತುಂಬಿಕೊಂಡು ನಾನೀ ಪ್ರಪಂಚಲ್ಲಿ ಬೆಳೆಯಬೇಕು, at-least ಹೃದ್ಯವಾಗಿ, ಪ್ರಬುದ್ಧವಾಗಿ ಪ್ರತಿಕ್ರಿಯೆ ನೀಡುವಷ್ಟಾದರೂ....
                      ಆ ದೂರದ ಬೆಟ್ಟವನ್ನು ಮುಟ್ಟಲು ಭಗೀರಥನಂತೆ ನನ್ನ ಪ್ರಯತ್ನ ನಡೆದೇ ಇರುತ್ತದೆ. 
                      ಯಶಸ್ವೀ ಭವ ಎನ್ನಿ ಮತ್ತೆ !! 






                     

Saturday, November 6, 2010

ನನ್ನಮ್ಮಾ............

ಈ ವಿರಾಟ್ ವಿಶ್ವವನ್ನೇ ಪರಿಚಯಿಸಿದ....  ಅಮ್ಮಾ.... ನಿನಗೆ ಕೃತಜ್ಞತೆಗಳು .
                 ಈ ವಿಶ್ವದ ಪರಿಭ್ರಮಣದೊ೦ದಿಗೇ ನಾನೂ ಪರಿಭ್ರಮಿಸುತ್ತಿದ್ದೇನೆ. ನನ್ನ ಸುತ್ತಲಿನ ಸು೦ದರ ಪ್ರಕೃತಿ, ಅದರ ವಿಕೋಪಗಳು, ಇಲ್ಲಿನ ಮಾನವ ನಿರ್ಮಿತ ಅದ್ಭುತಗಳು, ಶಬ್ದಕ್ಕೆ ನಿಲುಕದ ಅವನ ಬುದ್ಧಿ ಸಾಮರ್ಥ್ಯ, ಅವೆಲ್ಲವನ್ನೂ  ಮೀರಿ ನಿಲ್ಲುತ್ತಿರುವ ಇತ್ತೀಚೆಗಿನ ಅವನ ಮನೋದೌರ್ಬಲ್ಯ, ಈ ಸೃಷ್ಟಿಯ ವೈಚಿತ್ರ್ಯಗಳು, ಪ್ರಕೃತಿಯೊಂದಿಗೆ ಮಿಳಿತವಾಗಿರುವ ಈ ಜೀವ ಜಗತ್ತು, ಇವಕ್ಕೆಲ್ಲ ಕಾರಣೀಭೂತನಾದ ಆ ಸೂತ್ರಧಾರ ಯಾರೋ? ಆತ  ಎಲ್ಲಿದ್ದಾನೋ? ಹೇಗಿದ್ದಾನೋ? ಈ ಪೈಪೋಟಿಯ ಪ್ರಪಂಚದಲ್ಲಿ ನನ್ನ ಸ್ಥಾನ ಎಲ್ಲೋ? ಅರಿವಿಗೇ ಮೀರಿದ ನನ್ನೊಳಗಿನ ಪ್ರಶ್ನೆಗಳು.....         
                 
                ಈ ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿರುವ ನನಗೆ ಎಲ್ಲವೂ ಅಯೋಮಯ......         

                 ಕೊನೆಯಲ್ಲಿ ಅನ್ನಿಸುವುದೊಂದೇ ........
                 "ಕರುಣಾಳು ಬಾ ಬೆಳಕೆ                                                                     ಮುಸುಕಿದೀ ಮಬ್ಬಿನಲಿ                                                  
                   ಕೈ ಹಿಡಿದು ನಡೆಸೆನ್ನನು. "                                         

Friday, October 29, 2010

ಸಾಧನೆಯ ಹಾದಿಯಲ್ಲಿ.........


Study holidays ಅ೦ತ ಶುರುವಾಗಿಯೇ ಒ೦ದು ತಿ೦ಗಳಾಯಿತು. Sem practicle exams ಮುಗಿದು ಮೂರ್ ದಿನ ಆಯ್ತು. Theory exams ಮುಗಿಯೋಕೆ ಇನ್ನೂ ಒ೦ದು ತಿ೦ಗಳು ಬಾಕಿ ಇದೆ! ಇಲ್ಲಿ ನಾನು ಎಷ್ಟ್ ಓದ್ತಾ ಇದೀನಿ ಅನ್ನೋದು ಪ್ರಶ್ನೆ ಅಲ್ಲ. ನನ್ ಸಮಾಧಾನಕ್ಕಾಗಿಯಾದ್ರೂ ಎಚ್ಚರ ಇರೋವಷ್ಟ್ ಹೊತ್ತೂ ಕೈಲಿ ಪುಸ್ತಕ ಹಿಡ್ದಿದೀನಾ ಇಲ್ಲವಾ ಅನ್ನೋದು ಪ್ರಶ್ನೆ.

ವರ್ಷಕ್ 4 internals, 2 sem exams  ಅ೦ತಾ 6 ತಿ೦ಗಳು ಬರೀ ಪರೀಕ್ಷೆಗಳೇ. ಅದಕ್ಕೇ ಇರ್ಬೇಕು, degree ವಿದ್ಯಾರ್ಥಿಗಳೆಲ್ಲಾ ಈಗ exam ಅ೦ದ್ರೂ tension ಮಾಡ್ಕೊಳ್ಳೊಲ್ಲ(ಕೆಲ್ವರನ್ನ ಬಿಟ್ಟು). ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟ ಹಾಗೆ 3 idiots ಸಿನಿಮಾ ಪ್ರಭಾವ ಬೇರೆ. Examಗೆ 4 ದಿನ ಇರೋವಾಗ  syllabus ಹುಡ್ಕೋಕೆ, notes ಹೊ೦ದ್ಸೋಕೆ ಚುರುಕಾಗ್ತಾರೆ. ಅದನ್ನೇ ಹೆಮ್ಮೆಯಿ೦ದ ಹೇಳ್ಕೊಳ್ತಾರೆ ಕೂಡ.



"ಹೋಗೆ, ಅ೦ಗಡಿಯಿ೦ದ ಇಸ್ತ್ರಿ ಬಟ್ಟೆ ತೊಗೊ೦ಡುಬಾರೆ." "ನ೦ಗೆ ಓದ್ಕೋಬೇಕು ಅಮ್ಮಾ."  "phone bill ಕಟ್ಟಿ ಬಾರೆ." "ನ೦ಗೆ exam ದೇ.......,"   ಇಲ್ಲಿ ಕೆಲ್ಸದಿ೦ದ ಉಳುಚಿಕೊಳ್ಳೋಕೆ ಪರೀಕ್ಷೆಯದ್ದು ಮಹತ್ವದ ಪಾತ್ರ. ನ೦ಗೆ ಬೇಕಾದ ಸಿನಿಮಾ netನಲ್ಲಿ ನೋಡೋಕೆ, puzzle gamesಗೆ, tvಯಲ್ಲಿ ಬರೋ reality shows  ನೋಡೋಕೆಲ್ಲ ಇದು ಅನ್ವಯಿಸೋಲ್ಲ ಮತ್ತೆ.... ಹಾಗೇ ಪಪ್ಪ ಅಮ್ಮನೂ ಉಡುಪಿ, ಮ೦ಗಳೂರು, ಮೂಡುಬಿದ್ರೆಯ ಆಳ್ವಾಸ್ ನುಡಿಸಿರಿಗೆಲ್ಲಾ ನನ್ನನ್ನು ಬಿಟ್ಟು ಹೋಗೋವಾಗ ನನ್ನ exam ದೇ ಕಾರಣ ಕೊಡ್ತಾರೆ. ಅದು ಬೇಸರದ ವಿಷಯ. ಸಾಧನಾದಲ್ಲಿ ಜ್ಯೋತಿ ಪಟ್ಟಾಭಿರಾಮ್ ಅವರ ಭರತನಾಟ್ಯ ಇದೆ, ನೀನು ಬರಲ್ಲ ಅಲ್ವಾ? exam ಇದೆ. ಕಾರಣ ಹೇಳುವುದು ಅವರಿಗೂ ನಿರಾಳ. ಈ ಭಾಗ್ಯಕ್ಕೆ ಮನೆಲೇ ಇದ್ರೂ ತಲೆ free ಇರಲ್ಲ, ಹೊರಗಡೆ ಹೋದ್ರೂ ಮಜ ಬರಲ್ಲ.  ಮನೆಯಲ್ಲಿದ್ದು ಓದೋರ್ ಕಥೆ ಇದಾದ್ರೆ, hostel ನಲ್ಲಿದ್ದು ಓದ್ತಿರೋರ್ ವ್ಯಥೆ ಇನ್ ಹೇಗೋ....!

ಈ ಪರೀಕ್ಷೆಯ ನೆಪದಲ್ಲಿ ನಾನು ಪಡ್ಕೊ೦ಡಿದ್ದೆಷ್ಟು? ಕಳ್ಕೊ೦ಡಿರೋದೆಷ್ಟು? ಬಹುಶಃ ನಾನು ಕಳ್ಕೊ೦ಡಿರೋದೇ ಹೆಚ್ಚೇನೋ ಅನ್ಸೋಕ್ ಶುರುವಾಗಿದೆ. ಈ ಮಧ್ಯದಲ್ಲೇ  ಬ೦ದು ಹೋದ ಮದುವೆ(ಬೇರೆಯವರದ್ದು), ಹುಟ್ಟುಹಬ್ಬ, party, ಗಮ್ಮತ್ತು ಕಳ್ಕೊ೦ಡಿರೋದ್ರಲ್ಲೇ ಬ೦ತು. ಕೊನೆಯಲ್ಲಿ ಈ ಕಳ್ಕೊ೦ಡಿರೋ ಪಟ್ಟಿಯಲ್ಲಿ ನನ್ marks ಕೂಡ ಸೇರಿಕೊಳ್ದಿದ್ರೆ ಅಷ್ಟೇ ಸಾಕು. ಅದ್ಕೇ ನಾನ್ ಓದ್ಕೋಬೇಕು. ಈ social networks, blogs, updates, articles ಎಲ್ಲಾದಕ್ಕೂ bye bye, ಈ ಪರೀಕ್ಷೆಗಳೆಲ್ಲಾ ಮುಗಿಯೋವರೆಗೂ...  ಅಲ್ಲಲ್ಲಾ ನಾಳೆವರೆಗೂ....

ಇದು ನನ್ನೊಬ್ಬಳ ಅನುಭವ, ಅನಿಸಿಕೆಗಳು ಮಾತ್ರ ಅಲ್ಲ ಅ೦ದ್ಕೊ೦ಡಿದೀನಿ. ಇದ್ರಲ್ಲಿ ನ೦ಗೆ partners ಕೂಡ ತು೦ಬಾ ಇದ್ದಾರೆ (ಹಿ೦ದೆ ಇದ್ದವ್ರೂ, ಮು೦ದೆ ಬರುವವ್ರೂ) ಅನ್ನೋದೇ ನನಗೆ ಸ್ವಲ್ಪ ಸಮಾಧಾನ.

ಸಾಧನೆಯ ಹಾದಿಯಲ್ಲಿ ಎಷ್ಟೆಲ್ಲಾ..... ಕಲ್ಲು ಮುಳ್ಳು !!

Tuesday, August 24, 2010

ಬಾಲ್ಯದ ಕನಸುಗಳು ಕರಗುವ ಮುನ್ನ.......

                                ಇಲ್ಲೊಂದು ಚೆಂದದ ಆಂಟಿ. ಅವರ ಪುಟ್ಟ ಮಗಳೂ ಅವರ ಹಾಗೆಯೇ ತುಂಬಾ ಚೆಂದ. ಆದರೆ ಆ ಆಂಟಿಯ ಮನೆಯ ಪರಿಸರ, ಅವರಷ್ಟು ಚಂದವಾಗಿಲ್ಲ. ದಿನ ಬೆಳಗಾದರೆ ಅವರ ಪುಟ್ಟ ಮಗಳಿಗೆ ಬೈಗುಳದ ಸುಪ್ರಭಾತ. "ನಿನ್ನಾ..... ಹೊಡಿತೆ, ವದೀತೆ, ಚಚ್ತೆ, ಗುದ್ ಹಾಕ್ಬಿಡ್ತೆ ಕಾಣ್......! ಬೆತ್ತ ತರ್ಲಾ? ಬೆಲ್ಟ್ ತರ್ಲಾ? " ರಾತ್ರಿ ಮಲಗುವವರೆಗೂ ಇದೇ ಮಂತ್ರಾಕ್ಷತೆ. ಹಾಂ, ಆ ಆಂಟಿಗೆ ಪ್ರೀತಿ ಮಾಡಲು ಬರುವುದೇ ಇಲ್ಲ ಎಂದೇನಿಲ್ಲ! ಅವರ ಮನೆಯ ನಾಯಿ, ಪಕ್ಕದ ಮನೆಯ ಬೆಕ್ಕುಗಳಿಗೆಲ್ಲ (ಸುತ್ತಲಿರುವವರಿಗೆಲ್ಲ ಕಾಣುವ ಹಾಗೆ) ಪ್ರೀತಿಯ ಸಮಾರಾಧನೆ ಜೋರಾಗಿಯೇ ನಡೆದಿರುತ್ತದೆ.


                                ಮಗುವಿಗೆ ಚೆಂದದ ಅಂಗಿ, ಲಂಗ ಹಾಕಿದರೆ ಸಾಕೆ? kurkure, lays, kitkat, gud day (ಮಗುವಿಗೆ ಬಿಸ್ಕೆಟ್ನಲ್ಲಿ ಮಾತ್ರ ಗುಡ್ ಡೇ!) ಗುಡ್ಡೆ ಹಾಕಿದರೆ ಅಮ್ಮನ ಕರ್ತವ್ಯ ಮುಗಿಯಿತೇ? ಆ ಮಗುವಿನ ಭಾವನಾತ್ಮಕ ಬೇಕು ಬೇಡಗಳ ಕೇಳುವವರಾರು? ಅದರ ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಬೆಳಕಾಗುವವರಾರು?


                                ಆ ಮಗುವೀಗ ಪಾಲಕರಿಗೇ ತಿರುಗಿ ಬಿದ್ದಿದೆ. ಓದು ಬರೆಯುವ ವಿಷಯದಲ್ಲಿ ಅದು ಯಾರ ಮಾತನ್ನೂ ಕೇಳುತ್ತಿಲ್ಲ. Home work ಮಾಡಿಸುವಲ್ಲಿ ಅಮ್ಮನದ್ದು ಮಗಳದ್ದು ಜಟಾಪಟಿಯೇ ನಡೆದಿರುತ್ತದೆ. ಮಗಳೂ ಸೋಲುತ್ತಿಲ್ಲ. ಆದರೆ ಅವಳ ಭವಿಷ್ಯದ ಸೋಲಿಗೆ ಇದೇ ಪ್ರಾರಂಭ ಎಂದು ಅವರಿಗೆ ತಿಳಿದಂತಿಲ್ಲ. "ಅವ್ಳ್ class teacher, ನಮ್ಗೆ ಅವ್ಳನ್ ನೋಡ್ಕಂಬ್ಕೆ ಓದ್ಸುಕೆ ಆತಿಲ್ಲ, ಚೊರಿ. ನೀವ್ ಅವ್ಳ್ನಾ ಬೇರೆ school ಗೆ ಸೇರ್ಸುಕಾತ್ತಾ ಕಾಣಿ ಅಂಬ್ರ್, teacher ನನ್ನತ್ರ ಹಾಂಗ್ ಹೇಳುವಾಗ ನಾನ್ ಮರ್ಕಿಬಿಟ್ಟೆ ಗೊತ್ತಿತ್ತಾ. ನನ್ ಕಷ್ಟಾ ಯಾರತ್ರ ಹೇಳ್ಕಂಬ್ದ್ ಮಾರಾಯ್ರೆ?" ಎಂದು ಫೋನಿನಲ್ಲಿ, ಮನೆಗೆ ಬಂದವರಲ್ಲಿ, ಎದುರಿಗೆ ಸಿಕ್ಕವರಲ್ಲಿ ಇದನ್ನೇ ಅಲವತ್ತಿಕೊಳ್ಳುತ್ತಿರುತ್ತಾರೆ.


                                ತನ್ನ ಮಗಳ ರಗಳೆಯನ್ನು ಸಾದೋಹರಣವಾಗಿ ಸಾದರಪಡಿಸುವಾಗಲೊಮ್ಮೆ ನನ್ನಜ್ಜಿ ಅವರಲ್ಲಿ ಹೇಳಿದ್ದರು, "ಅವಳು ಶಾಲೆಯಿಂದ ಮನೆಗೆ ಬರೋದ್ರೊಳಗೆ ನಿಮ್ದೆಲ್ಲಾ ಕೆಲ್ಸನೂ ಮಾಡ್ಕೊಳಿ, ಉಳ್ದಿದ್ರಲ್ಲಿ ಹೆಚ್ಚಿನ್ time ನೀವ್ ಅವ್ಳಿಗೆ ಅಂತಾನೇ ಮೀಸಲಿಡಿ. ಅವ್ಳ್ ಆಟ, ಕೊಂಡಾಟಕ್ಕೂ ಅವ್ಕಾಶ ಕೊಡಿ. ಮಗು ಅಲ್ವಾ! ಅವ್ಳಿಗೆ ಇಷ್ಟಾ ಇದ್ದಿದ್ cartoon ನೋಡ್ಲಿಕ್ಕೆ ಬಿಡಿ! ಹಾಗೇ, ನೀವ್ ಕೆಲಸ ಮಾಡುವ ಹೊತ್ತಿಗೆ ಅವ್ಳಿಗೂ ಚೂರ್-ಪಾರ್ ಕೆಲ್ಸಾ ಕೊಟ್ ನೋಡಿ. ಅವ್ಳ್ ಮಾಡಿದ ಕೆಲ್ಸಕ್ಕೆ ಹೊಗಳಿಕೆಯ ಹೊನ್ನಗರಿ ಏರ್ಸಿ. ಆಗ ನೋಡಿ ನಿಮ್ಮಗ್ಳನ್ನ.......!" ಎಂದು. ೨ನೇ ಕ್ಲಾಸಿನ ಆ ಪುಟ್ಟ ಮಗುವೂ ಅದರಮ್ಮನೊಂದಿಗೆ ಈಗಿನ ಎಲ್ಲಾ ಸೀರಿಯಲ್ ಗಳನ್ನೂ ನೋಡುತ್ತದಂತೆ. ಬಹುಷಃ, ಆ ಮಗು ಬೇಡದ ವಿಷಯಕ್ಕೇ ಬಹು ಬೇಗ ಬೆಳೆಯುತ್ತದೆ ಎಂದು ನನ್ನಮ್ಮ ಹೇಳುತ್ತಿದ್ದರು.


                                ಆಂಟಿಯ ಧ್ವನಿಯೇ ಬಲು ಜೋರು. ಅವರು ಮಾತನಾಡಿದರೆ ಸಾಕು, ಸುತ್ತೇಳು ಮನೆಗಳಿಗೂ ಅನಾಯಾಸವಾಗಿ ಕೇಳಿಸುತ್ತದೆ. ಪಿಸುಗುಟ್ಟಿದರೆ, ಛೇ, ಎರಡೇ ಮನೆಗಳಿಗೆ ಕೇಳಿಸುತ್ತದೆ! ಇನ್ನು ಬೈದರಂತೂ ಬೊಬ್ಬೆಯೋ ಬೊಬ್ಬೆ. ಅವರ ಅಕ್ಕರೆಯೂ ಆವೇಶದಲ್ಲಿಯೇ ಇರುತ್ತದೆ. ಮಗುವನ್ನು ತೀರಾ ಮುದ್ದು ಮಾಡುವಾಗಲೊಮ್ಮೆ ಗುದ್ದೂ ಬಿದ್ದಿರುತ್ತದೆ. ಆ ಗುದ್ದು ಪ್ರೀತಿಯದ್ದೋ, ಸಿಟ್ಟಿನದ್ದೋ ಎಂದು ಪ್ರತ್ಯೇಕಿಸಲಾಗದೆ ಆ ಮಗು ಕೆಲವೊಮ್ಮೆ ಕಕ್ಕಾಬಿಕ್ಕಿ! ಸರಿ ತಪ್ಪುಗಳ ದ್ವಂದ್ವದಿಂದ ಹೊರಬರಲು ಅದು ಒದ್ದಾಡುತ್ತಿದೆ. ಇತ್ತೀಚೆಗೆ ಅದು ಸುಳ್ಳು ಹೇಳಲೂ ಪ್ರಾರಂಭಿಸಿದೆಯಂತೆ. ಕಣ್ಣುಗಳಲ್ಲಿ ಕಲರವಗಳಿಲ್ಲ, ಕನಸುಗಳಿಲ್ಲ. ಭಯದ ಕನವರಿಕೆಯೇ ಎಲ್ಲಾ. ಅದನ್ನು ಅರಿಯುವಷ್ಟು ಸಹೃದಯತೆ, ತಾಳ್ಮೆ ಆ ಮಹಾತಾಯಿಗಿಲ್ಲ. ತನ್ನ ನಾಳಿನ ಕರುಳ ಕುಡಿಗಳಿಗೂ ಈ ನರಳುವಿಕೆಯ ನಾಳೆಗಳನ್ನೇ ಬಳುವಳಿಯಾಗಿ ನೀಡಲು ಆ ಮಗುವೂ ಅಣಿಯಾಗುತ್ತಿದೆಯೆಂದು  ಆ ತಾಯಿಗಿನ್ನೂ ಅರಿವಾಗಿಲ್ಲ. ಮಕ್ಕಳ ವ್ಯಕ್ತಿತ್ವ ರೂಪಿಸುವ ಪಾಲಕರೇ ವ್ಯಕ್ತಿತ್ವ ಹೀನರಾಗಿ ವರ್ತಿಸಿದರೆ...?


                                ಹೊತ್ತು ಗೊತ್ತಿಲ್ಲದೇ ರಾಶಿ ರಾಶಿ ಬಟ್ಟೆಗಳನ್ನು ಗುಡ್ಡೆ ಹಾಕಿ ಒಗೆಯುವ ಈ ಅಮ್ಮನಿಗೆ ಇತ್ತೀಚೆಗೆ ಈ ಮಗಳ ಮತ್ತೆರಡು ಉಚ್ಚೆ ಚಾದರವೂ ಬೋನಸ್ಸಾಗಿ ಲಭಿಸುತ್ತಿದೆ. ಅದಕ್ಕಾಗಿ ವೈದ್ಯರ ಬಳಿ ತಾಕಲಾಟ, ಅಮ್ಮನಿಗೆ ಇದೊಂದು ಪೀಕಲಾಟ. ಈ ದಿನಗಳಲ್ಲಿ ಅಮ್ಮ ಮಗಳು ಇಬ್ಬರೂ ಸೊರಗಿದ್ದಾರೆ. ಅಮ್ಮನ ಬಗ್ಗೆಯೂ ಒಮ್ಮೊಮ್ಮೆ ಪಾಪ ಎನ್ನಿಸುವುದುಂಟು. ಅವರು ತಮ್ಮನ್ನು ತಾವೇ ವಿಮರ್ಶಿಸಿಕೊಳ್ಳುವಂತಿದ್ದಿದ್ದರೆ......! ತನ್ನ ಮಗಳ ಮೊಂಡುತನದ ಸಮಸ್ಯೆಗೆ ಪರಿಹಾರ ತನ್ನಲ್ಲಿಯೂ ಇರಬಹುದೇನೋ ಎಂದು ಈ ಅಮ್ಮ ಒಮ್ಮೆ ಯೋಚಿಸಿದ್ದಿದ್ದರೆ.......! ಎಲ್ಲಾ  ರೆ.... ರೆ.... ವಗೈರೆ.


                                 ಇಂತಹ ಪಾಲಕರು ನಮ್ಮ ನಿಮ್ಮ ನಡುವೆ ಅನೇಕರಿರುತ್ತಾರೆ. ಮಕ್ಕಳ ಸಮೃದ್ಧ ನಾಳೆಗೆ ಮುನ್ನುಡಿ ಬರೆಯಬೇಕಾದ ಪಾಲಕರೇ ಸಮಸ್ಯೆಗಳಿಗೆ ಮೂಲವಾದರೆ? ಮಕ್ಕಳ ಜೊತೆ ಮಕ್ಕಳಾಗಿ, ಅವರ ಭಾವನೆಗಳಿಗೆ ಸ್ಪಂದಿಸಿದಲ್ಲಿ ಇಂತಹ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದೇನೋ. ಅವರ ಸ್ವಚ್ಚಂದ ಬಾಲ್ಯವನ್ನು ಆಸ್ವಾದಿಸಲು ಬಿಡಿ. ಪಾಲಕರ ಮಹಾತ್ವಾಕಾಂಕ್ಷೆಯ ಒತ್ತಡಕ್ಕೆ ಮಕ್ಕಳ ಕನಸುಗಳು ಕರಗುವ ಮುನ್ನ...........
                      ಪಾಲಕರೇ, ಒಮ್ಮೆ ತಿರುಗಿ ನೋಡಿ.

Saturday, August 7, 2010

ಭರವಸೆಯ ಬೆನ್ನೇರಿ..




ಪ್ರತಿ ಕತ್ತಲೆಯ ಹಿಂದೂ ಬೆಳಕಿದೆ..
ಕತ್ತಲೆಯ ಸಹನೆಯಿಂದ ಕಳೆದರೆ,
ಮತ್ತೆ ಬೆಳಕಿದೆ..
ಆ ಬೆಳಕಿದೆಯೆಂಬ ಭರವಸೆಯಲ್ಲಿ
ಈ ಕತ್ತಲೆಯ ಕಳೆಯುತಿರುವೆ,
ಬೇಗ ಬಾ ಓ ಬೆಳಕೆ
ದೂರಾಗಿಸು ಈ ಕತ್ತಲೆಯ ನನ್ನಿಂದ....

Tuesday, July 20, 2010

ನಿನ್ನೆ ನಾಳೆಗಳ ನಡುವೆ..





















 ನಾಳೆ ಎನ್ನುವ ಇಂದು..
ನಾಳೆಯಾದರೆ ಅದೇ ಇಂದು..
ಮತ್ತದೇ ನಾಳೆ ಇಂದಿನ
ಪುನರಾವರ್ತನೆಗಳ ನಡುವೆ ನಮ್ಮ ಬದುಕು..


ನಿನ್ನೆ ಎಂಬ ಇಂದು,
ಮತ್ತೆ ಮರುಕಳಿಸದಿರಲಿ..
ನಾಳೆ ಎಂಬ ಇಂದು
ಹೊಸದಾಗಿರಲಿ..
ಜೀವನದ ಗುರಿಯತ್ತ
ನಮ್ಮ ಪಯಣ ಸಾಗಲಿ....

Monday, July 19, 2010

ನನ್ನಲ್ಲಿಯೇ ಕಳೆದುಹೋದ ನಾನು..














ಮನದ ಒತ್ತಡವೋ ,
ಪರಿಸ್ಥಿತಿಯ ಗೊಂದಲವೋ..
ಉಕ್ಕಿ ಉಕ್ಕಿ ಬರುತ್ತಿರುವ ಈ ಭಾವನೆಗಳ
ನಾ ಎಲ್ಲಿ ಹರಿಬಿಡಲಿ?
ನಗುವಿನಲ್ಲೋ?  ಕಣ್ಣೀರಿನಲ್ಲೋ?


ಬೀಸುತ್ತಿರುವ ತಂಗಾಳಿ ನನ್ನನ್ನು ಸೋಕುತ್ತಿಲ್ಲ..
ಸುರಿವ ಮಳೆಹನಿ ನನ್ನನ್ನು ಸ್ಪರ್ಷಿಸುತ್ತಿಲ್ಲ..
ಸೋತುಹೋದ ಹೃದಯ ಏನನ್ನೂ ಬಯಸುತ್ತಿಲ್ಲ..
ಎಲ್ಲರೊಡನಿದ್ದೂ  ಒಂಟಿ ಎನಿಸುತ್ತಿದೆ..
ಹೊಸ ದಿನದ ಸಂಕೇತವಾದ ಸೂರ್ಯ,
ಉದಯಿಸಿದರೂ ಮನ
ಯಾವ ಹೊಸದನ್ನೂ ಕೇಳುತ್ತಿಲ್ಲ..
ಈ ಒತ್ತಡದ ದಿನಚರಿಯಲ್ಲಿ
ನಾನಿದ್ದೂ ಇಲ್ಲವೆಂದೆನಿಸುತಿದೆ..
ನನ್ನಲ್ಲಿಯೇ ಕಳೆದುಹೋದ ನಾನು....

Tuesday, June 8, 2010

ಈ ಭೇದ ಭಾವಗಳಿಗೆ ಕೊನೆಯೇ ಇಲ್ಲವೆ??

ರಾತ್ರಿ.... ಮಲಗಿದ್ದೆ.... ಮೊನ್ನೆ ನಡೆದ ಭೀಕರ ವಿಮಾನಾಪಘಾತದ ಗುಂಗಿನಲ್ಲಿ.... ಎಲ್ಲೋ ದೂರದಲ್ಲಿ ಯಾರು ಯಾರದ್ದೋ ಧ್ವನಿ ಕೇಳಿಬರುತ್ತಿತ್ತು. ಪ್ರೇತಾತ್ಮಗಳು! ಭಯವಾಯಿತು. ಎರಡು ಪ್ರೇತಗಳ ನಡುವೆ ಚರ್ಚೆ ನಡೆದಂತಿತ್ತು.


"ನೋಡ್, ಆಕಡಿಗ್ ಕುಂತಾರಲ್ಲ, ಅವ್ರೆಲ್ಲಾ ಮೊನ್ನಿ ಆದ ವಿಮಾನ್ ಅಪಘಾತ್ದಾಗ್ ಸತ್ತವ್ರು. ಅವ್ರಿಗ್ ನಮ್ ಹಾಂಗ ಬಿಟ್ ಬಂದ್ ಸಂಸಾರದ್ ಹೊಟ್ಟಿ ಚಿಂತಿ ಇಲ್ ಬಿಡ. ರಾಜ್ಯ ಸರ್ಕಾರಾ, ಕೇಂದ್ರ್ ಸರ್ಕಾರಾ ಯೆರ್ಡೆರ್ಡ ಲಕ್ಷಾ ಪರಿಹಾರ್ ಕೊಡ್ತದಂತ ಅವ್ರಿಗೆ. ವಿಮಾ ಸಂಸ್ಥಿ, ವಿಮಾನ ಸಂಸ್ಥಿ ಎಲ್ಲಾ ಸೇರಿ ಅಜಮಾಸ್ ಒಂದೊಂದ್ ಕೋಟಿನ ಅಕ್ಕೈತೇನ!"

"ಹಂಗಾರ್ ನಮ್ ಸಂಸಾರಕ್ಕೂ ಅಷ್ಟ ಪರಿಹಾರ್ ಸಿಗ್ತದೇನ?"

"ನಮ್ಮವ್ರಿಗೇನ ಸಿಗ್ತದ ಮಣ್ಣ! ನಾವೇನ್ ವಿಮಾನದಾಗ್ ಸತ್ತೀವೇನ? ರಾಜ್ ಮರ್ಯಾದಿ ಸಿಗಾಕ! ಚಿತ್ರದುರ್ಗದ್ ಚಳ್ಳಕೆರಿ ಸಮೀಪ್ ಸಾದಾ ಬಸ್ ಅಪಘಾತದಾಗ್ ಸುಟ್ಕೊಂಡ್ ಸತ್ ಮೂವತ್ ಮಂದಿ ನಾವ್. ಬಸ್ನಾಗಿದ್ ಬಾಕಿ ೨೪ ಮಂದಿ ಗತಿ ಅದೇನಾತ ಯೇನ."

"ನಾವ್ ಸತ್ತಾಗ ನಮ್ನ್ ನೋಡಾಕೂ ಮಂತ್ರಿಗ್ಳ ಯಾರಾರ ಬಂದಿದ್ರೇನ? ಅವ್ರ್ ಜೀವಕ್ಕಾರ ಚಿನ್ನದ್ ಬೆಲಿ, ನಮ್ ಹೆಣಕ್ ಕೌಡಿ ಕಿಮ್ಮತ್ತಿಲ್ಲಾ. ಬಡವ್ರಿಗೆ ಬದ್ಕಿದ್ದಾಗ... ಇಲ್ದಿದ್ ಬೆಲಿ ಸತ್ ಮ್ಯಾಗ್ ಎಲ್ಲಿಂದ್ ಬರ್ತೈತ್ ಬಿಡ. ಸತ್ತ ಜೀವಕ್ಕೂ ಯದಕ್ ಈ ಭೇದ ಭಾವ ಮಾಡ್ತಾರ ಅಂತೀನಿ? ನಾವೇನ್ ತಪ್ ಮಾಡೀವಿ?"

"ಖರೆ ಹೇಳ್ದಿ ನೀ. ಆದ್ರ ಅವ್ರಿಗ ಕೋಟಿಗಟ್ಲೆ ಕೊಡೋರು ವಿಮ ಸಂಸ್ಥಿಯವ್ರು. ನಮ್ ಬಸ್ಸಿಗ್ ಯೆಲ್ಲಿರ್ತೈತಿ ಅಷ್ಟ ವಿಮಾ? ಆಕಡಿಗ್ ಇನ್ನೊಂದ್ ಗುಂಪೈತ್ ನೋಡ್. ಮೇ ೧೫ಕ್ ಭೋಪಾಲ್ ಬಸ್ ಅಪಘಾತದಾಗ್ ಕರ್ರೆಂಟ್ ತಾಗಿ ಸತ್ರಲ್ಲಾ ೨೮ ಮಂದಿ, ಅವ್ರ ಅವ್ರು. ಅವ್ರೆಲ್ರೂ ಬುಡಕಟ್ ಜನಾಂಗ್ದವ್ರಂತ್."

"ಅವ್ರಿಗೂ ಪರಿಹಾರ್ ಸಿಗ್ತೈತೋ ಇಲ್ಲೋ, ನಮ್ ಹಾಂಗ... ಪಾಪ್ ನೋಡ್."

"ನಮ್ಮವ್ರಿಗ ಹತ್ತಿಪ್ಪತ್ ಸಾವ್ರಾ ಕೊಟ್ ಹಾಂಗ್ ಮಾಡಿ ಕೈ ತೊಳ್ಕೊಂಡ್ ಬಿಡ್ತದೋ ಏನ್ ಈ ಸರ್ಕಾರ. ರಾಜ್ಯ ಸರ್ಕಾರಾ, ನಾವ್ ಸತ್ತಿದ್ದಕ್ಕೂ
ಯೆರ್ಡೆರ್ಡ ಲಕ್ಷಾ ಪರಿಹಾರ್ ಕೊಟ್ಟಿದ್ರ ಮನಿಯವ್ರಿಗಾದ್ರೂ ಎರ್ಡ್ ಹೊತ್ತಿನ ಊಟ ಆಕ್ಕಿತ್ತ್ ಸಲ್ಪ್ ದಿನಾ. ಹೋಗ್ಲಿ ಅಂದ್ರ ಅವ್ರಿಗ್ ಕೊಟ್ ಹಾಂಗ ದೊಡ್ ಮನ್ಶಾರ್ ಯಾರಾರ ಒಬ್ರ್ ದೊಡ್ ಮನ್ಸ್ ಮಾಡಿ ನಮ್ ಸಂಸಾರಕ್ಕೂ ಒಂದೊಂದ್ ಕೆಲಸ ಕೊಡ್ಶಿದ್ರ ನಮ್ಮನಿಯಾಗ ಬದ್ಕಿದ್ದವ್ರಿಗ್ ವಂದ್ ದಾರಿ ಆರ ಆಕ್ಕಿತ್ತ್. ಏನಂತಿ?"


"ಹವ್ದ್ ಮತ್ತ! ಅಂದಂಗ, ಅವರ್ ಸುದ್ದಿ ತಿಂಗ್ಳಗಟ್ಲೆ ಪಪೆರ್ನಾಗ್ ಬರ್ತೈತಲ್ಲ, ಹಾಂಗ ನಮ್ ಸುದ್ದಿನೂ ನಾಕ ದಿನಾನಾರ ಬರ್ತೈತ್ ಹವ್ದಿಲ್ಲೋ?"


"ಅಜ್ಜಿಗ್ ಅರವಿ ಚಿಂತಿ ಅಂದ್ರ ಮೊಮ್ಮಗಂಗ್ ಕಜ್ಜಾಯದ್ ಚಿಂತಿ ಅಂದಂಗಾತು ನಿನ್ ಕತಿ! ನಾ ಮನಿ, ಮಕ್ಳ, ಸಂಸಾರ ಅಂತ ತೆಲಿ ಕೆಡ್ಸಕೊಂಡ್ ಕುಂತ್ರ ಇವಂಗ್ ಪಪೆರ್ನಾಗ್ ತನ್ ಹೆಸ್ರ್ ಬರ್ತೈತೋ ಇಲ್ಲೋ ಅನ್ನು ಚಿಂತಿ! ಹುಚ್ಚ್ ಖೋಡಿ ಅಡಿ ನೋಡ್ ನೀ."


"ಯೇ ನೋಡ್ಲಾ, ಮತ್ಯಾವನೋ ಬರಾಕತ್ತಾನ! ಇವಾ ಯಾವ್ ಅಪಘಾತದೊಳ್ಗ್ ಜೀವಾ ಕಳ್ಕೊಂಡಾನ ಯೇನ."


"ವಿಚಾರ್ಸೂಣ್ ತಡಿ... ಲೇ... ಇಲ್ ಬಾರಲೇ...!" ಎಂದು ಪ್ರೇತ ಕೂಗಿದಾಗ ನನಗೆ ಒಮ್ಮೆಲೇ ಎಚ್ಚರವಾಯಿತು (ನಿದ್ದೆಯಿಂದ)! ಕನಸುಗಳು ಕರಗಿದ್ದವು. ವಾಸ್ತವ ಕಣ್ಣ ಮುಂದಿತ್ತು. ಪ್ರೇತಗಳ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ನಿಜ. ದಿನನಿತ್ಯ ಅಪಘಾತಕ್ಕೆ ಸಿಲುಕುವ ಬಡಪಾಯಿಗಳ ಜೀವಕ್ಕೆ ಬೆಲೆ ಇಲ್ಲ ಇಲ್ಲಿ. ಇವರ ಕುಟುಂಬದವರು ಅಪಘಾತದ ಪರಿಹಾರಕ್ಕಾಗಿ ಕಾನೂನಿನ ಮೊರೆ ಹೊಕ್ಕು ಹೋರಡುವಷ್ಟು ಶಕ್ತರೂ ಅಲ್ಲ.


ಅಪಘಾತ ವಲಯ ಎಂದೇ ಹೆಸರಾಗಿರುವ ಆನೆಗುಂಡಿ, ಬೈಂದೂರ, ಚಾರ್ಮುಡಿ ಘಾಟಿನಂತ ಪ್ರದೇಶಗಳು 'ಮರಣ ಮೃದಂಗ' ಬಾರಿಸುತ್ತಲೇ ಇವೆ. ಇಲ್ಲಿನ ಇಳಿಜಾರಿನ ರಸ್ತೆಯ ತಿರುವುಗಳು ಬಹಳ ಅಪಾಯಕಾರಿಯಾಗಿವೆ. ರಸ್ತೆಯ ಸೂಚನಾ ಫಲಕಗಳೂ ತುಂಬಾ ಕಿರಿದು. ಇಂಥಲ್ಲಿ ಗುಡ್ಡವನ್ನು ಇನ್ನಷ್ಟು ಕಡಿದು ರಸ್ತೆ ಅಗಲಗೊಲಿಸಿಯೋ ಅಥವಾ ರಸ್ತೆಯನ್ನು ಸ್ವಲ್ಪವಾದರೂ ನೇರಗೊಳಿಸಿದ್ದಲ್ಲಿ, ಅಲ್ಲಿನ ಅಪಘಾತಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ತಪ್ಪಿಸಬಹುದಿತ್ತೇನೋ.


ವಿಮಾನಾಪಘಾತಗಳನ್ನು ಕಡಿಮೆಗೊಳಿಸಲು ಹೇಗೆ ಪ್ರಯತ್ನ ನಡೆಯುತ್ತಿದೆಯೋ, ಹಾಗೆಯೇ ಇಲ್ಲಿಯೂ ಪ್ರಯತ್ನ ನಡೆಯುತ್ತಲೇ ಇದ್ದರೂ ಫಲದಾಯಕವಾಗುತ್ತಿಲ್ಲ. ಕಾರಣ ಅತಿವೇಗದ, ಅಜಾಗರೂಕತೆಯ ಚಾಲನೆ, ಬೆಳಗಿನ ಜಾವದಲ್ಲಿನ ವಾಹನ ಚಾಲನೆಯ ಜೊತೆಗೆ ಕುಡಿದು ವಾಹನ ಚಲಾಯಿಸುವುದೂ ಅಪಘಾತಗಳಿಗೆ ಪ್ರೇರಣೆಯಾಗಿವೆ. ಅಂದಲ್ಲಿ, ಅಪಘಾತಗಳನ್ನು ತಪ್ಪಿಸುವಲ್ಲಿ ಕೇವಲ ಸರ್ಕಾರ ಒಳ್ಳೆಯ ರಸ್ತೆ, ಬೇಕಾದ ಅನುಕೂಲತೆಗನ್ನು ಒದಗಿಸಿದರೆ ಸಾಲದು, ನಮ್ಮ ಹೊಣೆಯೂ ಇದರಲ್ಲಿ ಮಹತ್ವದ್ದಾಗಿದೆ. ಅಂತೆಯೇ ತಮ್ಮ ತಪ್ಪಿಲ್ಲದೆಯೂ ಇಂತಹ ದುರಂತಗಳಿಗೆ ಸಿಲುಕುವ ಪ್ರಯಾಣಿಕರಿಗೆ ಸಮಾನವಾದ ಪರಿಹಾರ ನೀಡುವುದೂ ಸರ್ಕಾರದ ಕರ್ತವ್ಯವಾಗಿದೆ. ಇಂತಹ ದುರಂತಗಳಿಗೆ ಬಲಿಯಾದ ಬಡವರಿಗೆ ನ್ಯಾಯ ಒದಗಿಸುವಲ್ಲಿ ನಾವೂ ಕೂಡ ಧ್ವನಿಯಾಗೋಣ.
________________________________________________________
       was published in udayavani on 13/06/2010



Friday, June 4, 2010

ಇದೆಂಥ ಮನೋದೌರ್ಬಲ್ಯ?

ಒಂದು ವಾರದ ಹಿಂದೆ ಅಮ್ಮನ ಜೊತೆ ಧಾರವಾಡದಿಂದ ರಾತ್ರಿ ೯ ಗಂಟೆಗೆ ಖಾಸಗಿ ಬಸ್ಸಿನಲ್ಲಿ ನನ್ನ ಪ್ರಯಾಣ ಸಾಗಿತ್ತು. ಹುಬ್ಬಳ್ಳಿಯಲ್ಲಿ ಅರ್ಧ ಗಂಟೆ ಬಸ್ ನಿಲ್ಲಿಸಿದ್ದರು. ಬಸ್ ನಿಲ್ದಾಣದ ಎದುರು, ಸಾಲು ಹಿಡಿದು ಸಾರಾಯಿ ಅಂಗಡಿಗಳು. ನನಗೇಕೋ ಬಸ್ ನಿಲ್ಲಿಸಿದ ಜಾಗ ಸರಿ ಅನ್ನಿಸಲಿಲ್ಲ, ಮುಜುಗರ ತರಿಸುತ್ತಿತ್ತು. ಅಲ್ಲಿ ನನ್ನ ಕಣ್ಣಿಗೆ ಬಿದ್ದ ಒಂದು ಸನ್ನಿವೇಶ ಮನಸ್ಸನ್ನು ಘಾಸಿಗೊಳಿಸಿತು.

ಸಾರಾಯಿ ಅಂಗಡಿಗಳಲ್ಲಿ ಒಳ ಹೋಗುವವರು ಹೊರಬರುವವರಲ್ಲಿ ಹದಿಹರೆಯದವರ ಸಂಖ್ಯೆಯೇ ಹೆಚ್ಚಿತ್ತು. ನಮ್ಮಬಸ್ ಹೊರಡಲು ಇನ್ನು ಕೆಲವೆ ಕ್ಷಣಗಳು ಬಾಕಿ ಉಳಿದಿದ್ದವು. ಅಷ್ಟು ಹೊತ್ತಿಗೆ ನಮ್ಮ  ಬಸ್ಸಿನವನೆ ಆದ ಒಬ್ಬ ಪ್ರಯಾಣಿಕ ಬಸ್ ನಿಂದ ಇಳಿದು ಆ ಅಂಗಡಿಯತ್ತ ನಡೆದ. ಹಿಂದಿನಿಂದ ಅವನ ಸಂಬಂಧಿ ಅವನನ್ನು ಕೂಗಿ ಕೂಗಿ ಕರೆದಳು. 'ಹೋಗ್ಬೇಡೋ ತಮ್ಮಾ, ಬಸ್ ಬಿಡ್ತೈತಿ' ಎಂದು. ಆದರೆ ಆ ಮನುಷ್ಯ ಅವಳ ಕೂಗನ್ನು ಕಿವಿಗೆ ಹಾಕಿಕೊಳ್ಳದೆ ಹೊಗಿಯೇಬಿಟ್ಟ.

ಕೆಲ ಕ್ಷಣಗಳಲ್ಲಿ ಬಸ್ ಕಂಡಕ್ಟರ್ 'ಎಲ್ಲಾರೂ ಅದೀರಲ್ಲಾ, ಎರಡ್ ನಿಮ್ಷದೊಳ್ಗ್ ಬಸ್ ಬಿಡ್ತೀವಿ' ಎಂದ. ತಕ್ಷಣ ಬಸ್ಸಿನಲ್ಲಿದ್ದ ಆತನ ಸಂಬಂಧಿ ಕೆಳಗಿಳಿದು ಅವನ ಹಿಂದೆಯೇ ಓಡಿದಳು. ಅವನನ್ನು ಕರೆಯಬೇಕಲ್ಲ... ಒಬ್ಬ ಸುಸಂಸ್ಕೃತ ಹೆಣ್ಣಾಗಿ ಆ
ಸಾರಾಯಿ ಅಂಗಡಿಯೊಳಗೆ ಹೋಗಲು ಹೇಗೆ ಸಾಧ್ಯ? ಹೊರಗಿನಿಂದಲೇ 'ಲೋ ತಮ್ಮಾ...' ಎಂದು ಕೂಗಿದಳು. ಉತ್ತರ ಬರಲಿಲ್ಲ. 'ಮಹಾಂತೇಶಾ...' ಎಂದು ಮತ್ತೆ ಮತ್ತೆ ಕೂಗಿದಳು. ಕೇಳಬೇಕಲ್ಲ ಆ ಮಹಾಪುರುಷನಿಗೆ. ಅಷ್ಟು ಸಾಲದೆಂದು ಆ ಅಂಗಡಿಯಲ್ಲಿದ್ದ ಆ ಜನ (ಕುಡುಕರು) ಅವಳಿಗೆ ಸಹಾಯ ಮಾಡುವುದನ್ನು ಬಿಟ್ಟು ಅವಳ ಆ ಸ್ಥಿತಿಯನ್ನು ನೋಡಿ ನಗಲಾರಂಭಿಸಿದರು! ಅಷ್ಟರಲ್ಲಿ ಬಸ್ ಕಂಡಕ್ಟರ್ ಆ ಹೆಂಗಸನ್ನು ಬೊಟ್ಟು ಮಾಡಿ 'ನೀವ್ ಬರ್ತಿರೋ ಏನ್ ಬಸ್ ಬಿಡ್ಲೋ' ಎಂದು ಕೇಳಿದ್ದಕ್ಕೆ ಆಕೆ ಬೇರೆ ದಾರಿ ಕಾಣದೆ ಸುಮ್ಮನೆ ಬಸ್ ಹತ್ತಿದಳು. ಪ್ರಯಾಣ ಸಾಗಿತು. ಅದುವರೆಗೂ ಬಸ್ಸಿನ ಕಿಟಕಿಯಿಂದ ಅಸಹಾಯಕಳಾಗಿ ಇವನ್ನೆಲ್ಲ ನೋಡುತ್ತಿದ್ದ ಅವನ ಹೆಂಡತಿಯ ಮನದ ಬೇಗುದಿ ಬಿಕ್ಕಳಿಕೆಯಾಗಿ ಬದಲಾಗಿತ್ತು.
















ಅವಳ ಕಣ್ಣೀರನ್ನು ಒರೆಸುವವನೇ ಅವಳ ಆ ಕಣ್ಣೀರಿಗೆ ಕಾರಣನಾದಾಗ? ಬಸ್ ಸೀಟ್ ರಿಸರ್ವ್ ಮಾಡಿಸಿದ್ದನ್ನೂತಪ್ಪಿಸಿಕೊಳ್ಳುವಷ್ಟರ ಮಟ್ಟಿಗೆ ಮೀರಿ ನಿಂತಿತ್ತು ಅವನಲ್ಲಿ ಚಟ. ದುಶ್ಚಟ ಒಬ್ಬ ವ್ಯಕ್ತಿಯನ್ನು ಎಷ್ಟರ ಮಟ್ಟಿಗೆ ಕೆಳಗಿಳಿಸಬಹುದು? ತಮ್ಮಮನೋದೌರ್ಬಲ್ಯದಿಂದ ಸುತ್ತಲಿನ ಸಂಬಂಧಿಗಳ ಕನಸುಗಳು ಕರಗಿ ಹೋಗುತ್ತಿರುವುದೂ ಅವರರಿವಿಗೆ ಬಾರದು, ಅಂತಹ ಸ್ವಾರ್ಥಿಗಳು.

ನಮ್ಮ ಸಂಸ್ಕೃತಿಯ ತೇರನ್ನೆಳೆವ ಈ ಸಮಾಜವೇ ಎಷ್ಟೊಂದು ರೋಗಪೀಡಿತ! ಮನಸ್ಸಿನ ದೌರ್ಬಲ್ಯ ಸದೃಢವಾದ ಸಮಾಜವನ್ನು ಹಂತ ಹಂತವಾಗಿ ಸಮಾಧಿಗೊಳಿಸುತ್ತಿದೆ ಎನ್ನಿಸಿತು. ಎಷ್ಟೋ ಅಸಾಮಾನ್ಯ ಪ್ರತಿಭೆಗಳು ಇಂತಹ ಕೀಳು ಮನೋಪ್ರವ್ರತ್ತಿಯಿಂದ ವ್ಯರ್ಥ ಪೋಲಾಗುತ್ತಿವೆ. ನಿಜವಾದ ಬಡತನವೆಂದರೆ ಇದೆ ಏನೋ!

_________________________________________________
                     was published in vijaya karntaka on 27/05/2010